ಸೋಮವಾರಪೇಟೆ | ಮಗನ ಸಾವಿಗೆ ಕಾರಣವಾದ ಅಪಘಾತ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ ತಂದೆ
ಸೋಮವಾರಪೇಟೆ, ಮಾ.21: ನನ್ನ ಮಗನಾದ ಭಾನುಮೂರ್ತಿಯನ್ನು ಕೊಲೆಮಾಡಿ ರಸ್ತೆಯಲ್ಲಿ ಹಾಕಿ ಅಪಘಾತ ಎಂದು ಬಿಂಬಿಸಿ ಪ್ರಕರಣ ದಾಖಲಿಸಲಾಗಿ ದೆ. ಘಟನೆಯ ಬಗ್ಗೆ ಪೊಲೀಸರು ಮರು ತನಿಖೆ ನಡೆಸುವ ಮೂಲಕ ಕುಟುಂಬಕ್ಕೆ ನ್ಯಾಯ ಕೊಡಿಸಬೇಕು ಎಂದು ಮೃತರ ತಂದೆ ಕೆ.ಎನ್.ಚಂದ್ರು ಒತ್ತಾಯಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ನನ್ನ ಮಗನಾದ ಭಾನುಮೂರ್ತಿ ಆಟೊರಿಕ್ಷಾ ಓಡಿಸಿಕೊಂಡು ಅದರಲ್ಲಿ ಬರುವ ಬಾಡಿಗೆ ಹಣದಿಂದ ನಮ್ಮ ಕುಟುಂಬವನ್ನು ಸಾಕುತ್ತಿದ್ದ. ಕಳೆದ ಜ.31ರಂದು ಸಂಜೆ 7.30ರ ಸಮಯದಲ್ಲಿ ಬಾಣಾವಾರದಿಂದ ಹೆಬ್ಬಾಲೆಗೆ ಬಾಡಿಗೆ ಹೋಗಿ ಹಿಂತಿರುಗಿ ಬಾಣಾವಾರಕ್ಕೆ ಬರುವಾಗ ಸಿದ್ದಲಿಂಗಪುರ ಮುತ್ತಪ್ಪನವರ ಮನೆಯ ಎದುರು ಅಪಘಾತವಾದ ರೀತಿಯಲ್ಲಿ ಆಟೊ ಮತ್ತು ಸ್ಕೂಟಿ ಕಂಡು ಬಂದಿದ್ದು, ಆಟೊದಲ್ಲಿದ್ದ ನನ್ನ ಮಗ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ಆದರೆ ಸ್ಕೂಟಿಯಲ್ಲಿದ್ದವರಿಗೆ ಏನೂ ಆಗಿಲ್ಲ ಎಂದು ಹೇಳಿದರು. ಅಪಘಾತವಾಗುವುದಕ್ಕಿಂತ ಮುನ್ನ ಸಿದ್ದಲಿಂಗಪುರದ ಬಾರ್ನಲ್ಲಿ ಗಲಾಟೆ ನಡೆದಿದ್ದು ಮಗನಿಗೆ ಹಲ್ಲೆ ನಡೆಸಿ, ನಂತರ ಹಿಂಬಾಲಿಸಿ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಅಪಘಾತವೆಂದು ಕಟ್ಟುಕತೆ ಕಟ್ಟಿದ್ದಾರೆ' ಎಂದು ಆರೋಪಿಸಿದರು.
'ಈ ಸಂಪೂರ್ಣ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗಿದೆ. ಅಲ್ಲಿ ಹಲ್ಲೆ ಮಾಡಿದವರ ಹೆಸರುಗಳನ್ನು ಕೊಟ್ಟಿದ್ದೇವೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕುಶಾಲನಗರ ಇನ್ ಸ್ಪೆಕ್ಟರ್ ಅವರಿಗೆ ದೂರು ನೀಡಲಾಗಿದ್ದು ಒಂದು ತಿಂಗಳಾದರೂ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಪರಿಶಿಷ್ಟ ಜಾತಿಯ ಬಡವರು ಎಂಬ ಕಾರಣಕ್ಕೆ ಯಾವುದೇ ಮಾಹಿತಿ ನೀಡುತ್ತಿಲ್ಲ' ಎಂದು ದೂರಿದರು.
ಸೂಕ್ತ ತನಿಖೆಗೆ ಆಗ್ರಹಿಸಿ ಈಗಾಗಲೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ನಿಷ್ಪಕ್ಷ ತನಿಖೆ ಮಾಡಿ, ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ. ಸೂಕ್ತ ನ್ಯಾಯ ಸಿಗದಿದ್ದರೆ ಸ್ತ್ರೀಶಕ್ತಿ ಸಂಘಗಳು ಹಾಗೂ ದಲಿತಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೃತನ ತಾಯಿ ಶಿವಮ್ಮ, ತಂಗಿ ಭವಾನಿ, ಮಾವ ಕುಳ್ಳಯ್ಯ ಇದ್ದರು.