ಕೇಂದ್ರ ಸಚಿವ ಗಡ್ಕರಿ ಕಚೇರಿಗೆ ಬೆಳಗಾವಿಯಿಂದ ಮತ್ತೆ ಜೀವ ಬೆದರಿಕೆ ಕರೆ
ಬೆಳಗಾವಿ: ತಾಲೂಕಿನ ಹಿಂಡಲಗಾ ಜೈಲಿನಲ್ಲಿರುವ ಕೈದಿಯ ಹೆಸರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಕಚೇರಿಗೆ ಮತ್ತೊಮ್ಮೆ ಜೀವಬೆದರಿಕೆ ಕರೆ ಮಾಡಲಾಗಿದೆ ಎಂದು ವರದಿಯಾಗಿದೆ.
''ನನಗೆ 10 ಕೋಟಿ ರೂ. ಹಣ ನೀಡಬೇಕು. ಇಲ್ಲದಿದ್ದರೆ ನಿತಿನ್ ಗಡ್ಕರಿ ಅವರನ್ನು ಕೊಲೆ ಮಾಡುತ್ತೇನೆ'' ಎಂದು ಹೇಳಿಕೊಂಡು ಬೆಳಗಾವಿಯಿಂದ ಜಯೇಶ್ ಪೂಜಾರಿ ಎಂಬ ವ್ಯಕ್ತಿ ಕರೆ ಮಾಡಿದ್ದಾಗಿ ನಾಗ್ಪುರ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರ ಎಟಿಎಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆದರೆ, ಈ ಆರೋಪವನ್ನು ನಿರಾಕರಿಸಿರುವ ಜೈಲಿನ ಅಧಿಕಾರಿಗಳು ''ಹಿಂಡಲಗಾ ಜೈಲಿನಲ್ಲಿ ತಪಾಸಣೆ ಮಾಡಲಾಗಿದೆ. ಯಾರ ಬಳಿಯೂ ಮೊಬೈಲ್ ಇಲ್ಲ. ಕರೆಯನ್ನು ಸದ್ಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಜಯೇಶ್ ಪೂಜಾರಿ ಮಾಡಿಲ್ಲ'' ಎಂದು ತಿಳಿಸಿದ್ದಾರೆ.
ಈ ಹಿಂದೆ ಬೆಳಗಾವಿ ಹಿಂಡಲಗಾ ಜೈಲಿನ ಕೈದಿ ಜಯೇಶ್ ಕಾಂತಾ ಹೆಸರಿನಿಂದ ಜನವರಿ 14 ರಂದು ನಿತಿನ್ ಗಡ್ಕರಿ ಕಚೇರಿಗೆ ಜೀವ ಬೆದರಿಕೆ ಕರೆ ಬಂದಿತ್ತು. ಆಗ ಹಿಂಡಲಗಾ ಜೈಲಿಗೆ ಭೇಟಿ ನೀಡಿದ್ದ ಮಹಾರಾಷ್ಟ್ರದ ಅಧಿಕಾರಿಗಳ ತಂಡ ತನಿಖೆ ನಡೆಸಿದ್ದರು. ಇದೇ ವಿಚಾರವಾಗಿ ಜೈಲಿನ ಏಳು ಸಿಬ್ಬಂದಿಗೆ ನೋಟಿಸ್ ನೀಡಲಾಗಿತ್ತು.