ಚಿಕ್ಕಮಗಳೂರು: ಮತದಾರರಿಗೆ ಹಂಚಲು ಗುಜರಾತ್ನಿಂದ ತರಿಸಲಾಗಿದ್ದ ಸೀರೆಗಳು ವಶಕ್ಕೆ
ಚಿಕ್ಕಮಗಳೂರು, ಮಾ.23: ವಿಆರ್ ಎಲ್ ಸಂಸ್ಥೆಗೆ ಸೇರಿದ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಹಾಗೂ ಚುನಾವಣಾಧಿಕಾರಿಗಳ ತಂಡ ಮತದಾರರಿಗೆ ಹಂಚಲು ಗುಜರಾತ್ನಿಂದ ತರಲಾಗಿದ್ದ ಸುಮಾರು 2ಲಕ್ಷ ರೂ. ಮೌಲ್ಯದ 600 ಸೀರೆಗಳನ್ನು ವಶಕ್ಕೆ ಪಡೆದಿರುವ ಘಟನೆ ಬುಧವಾರ ಸಂಜೆ ನಗರದಲ್ಲಿ ವರದಿಯಾಗಿದೆ.
ಮತದಾರರಿಗೆ ಹಂಚಲು ಗುಜರಾತ್ನಿಂದ ಸೀರೆಗಳನ್ನು ತರಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧವಾರ ಸಂಜೆ ಚುನವಣಾಧಿಕಾರಿಗಳ ತಂಡ ಹಾಗೂ ಪೊಲೀಸರು ನಗರದ ಜಯನಗರ ಬಡಾವಣೆಯಲ್ಲಿರುವ ವಿಆರ್ಎಲ್ ಸಂಸ್ಥೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ದಾಖಲೆಗಳಿಲ್ಲ ಸುಮಾರು 600 ಸೀರೆಗಳು ಪತ್ತೆಯಾಗಿದ್ದು, ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ಸೀರೆಗಳನ್ನ ಅಧಿಕಾರಿಗಳ ತಂಡ ಸೀಜ್ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಸೀರೆಗಳನ್ನು ಗುಜರಾತ್ ರಾಜ್ಯದ ಸೂರತ್ನಲ್ಲಿರುವ ಸೀರೆ ಕಾರ್ಖಾನೆಯಿಂದ ತರಲಾಗಿದ್ದು, ಅಲ್ಲಿಂದ ನಗರದ ಚಂದನ್ಕುಮಾರ್ ಜೈನ್ ಎಂಬವರ ಹೆಸರಿಗೆ ಕಳುಹಿಸಲಾಗಿತ್ತೆಂದು ತಿಳಿದು ಬಂದಿದ್ದು, ಸೀರೆ ಸಂಬಂಧದ ದಾಖಲೆಗಳಿಗಾಗಿ ಅಧಿಕಾರಿಗಳ ತಂಡ ಸೀರೆ ಫ್ಯಾಕ್ಟರಿ ಹಾಗೂ ಚಂದನ್ಕುಮಾರ್ ಜೈನ್ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಮಾಹಿತಿ ಸಿಕ್ಕಿಲ್ಲ ಎನ್ನಲಾಗಿದೆ.
ಸೀರೆಯ ವಾರಸುದಾರರು ಹಾಗೂ ಸೂಕ್ತ ದಾಖಲೆಗಳು ಸಿಗದ ಹಿನ್ನೆಲೆಯಲ್ಲಿ ಈ ಸೀರೆಗಳನ್ನು ಮತದಾರರಿಗೆ ಹಂಚಲು ತರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳ ತಂಡ ಶಂಕಿಸಿದ್ದು, ಘಟನೆ ಸಂಬಂಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.