ಶಾಸಕ ಶಾಮನೂರು ಶಿವಶಂಕರಪ್ಪ, ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಪ್ರಕರಣ ದಾಖಲು
ಮತದಾರರಿಗೆ ಆಮಿಷ ಒಡ್ಡಿದ ಆರೋಪ
ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಮೇಲೆ ಜನರಿಗೆ ಆಮಿಷ ತೋರಿಸಿ ಕೊಡುಗೆ ಹಂಚುತ್ತಿದ್ದ ಆರೋಪದ ಮೇಲೆ ಕೆಟಿಜೆ ನಗರದ ಪೊಲೀಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
''ಎಸ್.ಎಸ್ ಮತ್ತು ಎಸ್.ಎಸ್.ಎಂ ಅಭಿಮಾನಿ ಬಳಗ''ದ ಹೆಸರಿನಲ್ಲಿ ಹಂಚುತ್ತಿದ್ದ 7.19 ಲಕ್ಷ ಮೌಲ್ಯದ ದೋಸೆ ಹಂಚು ಮತ್ತಿತರ ವಸ್ತುಗಳನ್ನು ವಶ ಪಡಿಸಿಕೊಂಡಿದ್ದು, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಎ1, ಎಸ್.ಎಸ್.ಮಲ್ಲಿಕಾರ್ಜುನ್ ಎ2 ಆರೋಪಿಯಾಗಿ ಪೊಲೀಸ ಠಾಣಿಯಲ್ಲಿ ಎಫ್.ಐ.ಆರ್. ದಾಖಲಾಗಿದೆ.
ಸೀರೆ, ಕುಕ್ಕರ್, ಅಡುಗೆ ಉಪಕರಣಗಳನ್ನು ನಾವು ಹಂಚಿಲ್ಲ: ಸ್ಪಷ್ಟನೆ
ದಾವಣಗೆರೆ: ಸೀರೆ, ಕುಕ್ಕರ್, ಅಡುಗೆ ಉಪಕರಣಗಳನ್ನು ನಾವು ಹಂಚಿಲ್ಲ.ನಮ್ಮ ವಿರುದ್ಧ ಪ್ರಕರಣ ದಾಖಲಿಸಿರುವ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ಎಸ್. ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ಹಂಚಿರುವ ಕುರಿತಂತೆ ಯಾವುದೇ ಮಾಹಿತಿ ಇಲ್ಲ. ಅಭಿಮಾನಿಗಳು, ಗೆಳೆಯರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಹಂಚಿರುವ ಸಾಧ್ಯತೆ ಇದೆ. ಇಲ್ಲದಿದ್ದರೆ ಬಿಜೆಪಿಯವರೇ ಹಂಚಿ ನಮ್ಮ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿರಬಹುದು ಎಂದು ಆರೋಪ ಮಾಡಿದರು.
ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಸಭೆಗಳನ್ನು ನಡೆಸುತ್ತಿದ್ದೇವೆ. ಜಿ. ಎಂ. ಸಿದ್ದೇಶ್ವರ ಬಿಜೆಪಿ ಪಕ್ಷದಿಂದ ನನ್ನ ವಿರುದ್ದ ಕಣಕ್ಕಿಳಿದರೆ ಇಳಿಯಲಿ. ನಮಗೇನೂ ತೊಂದರೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.