ಮೂಡಿಗೆರೆ: ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಹಾಲಪ್ಪ ಗೌಡ
ಮೂಡಿಗೆರೆ: ಸಿದ್ದಾರ್ಥ ವನದ ಸಂಸ್ಥಾಪಕ ಅಧ್ಯಕ್ಷರಾಗಿರುವ ಜಿ.ಎಚ್.ಹಾಲಪ್ಪಗೌಡ ಅವರು ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಗೌತವಳ್ಳಿಯ ಜಿ.ಎಚ್.ಹಾಲಪ್ಪಗೌಡ ಅವರು ಕಳೆದ ಕೆಲವು ವರ್ಷಗಳ ಹಿಂದೆ ಬಿಜೆಪಿ ಸೇರ್ಪಡೆಗೊಂಡಿದ್ದರು. ಶುಕ್ರವಾರ ಬೆಂಗಳೂರಿನಲ್ಲಿ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾದರು.
1978ರಲ್ಲಿ ಇಂದಿರಾಗಾಂಧಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರಾಗಿ ಕೆಲಸ ಮಾಡಿದ್ದ ಜಿ.ಎಚ್.ಹಾಲಪ್ಪಗೌಡ ಅವರು, ನಂದಿಪುರ ಗ್ರಾ.ಪಂ.ಮಾಜಿ ಸದಸ್ಯರಾಗಿ, ಕಸಬ ಹೋಬಳಿ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ, ಮೂಡಿಗೆರೆ ಪಪಂ ಮಾಜಿ ಅಧ್ಯಕ್ಷರಾಗಿ, ಕರ್ನಾಟಕ ವೇರ್ ಹೌಸಿಂಗ್ ಕಾರ್ಪೋರೇಶನ್ ನಿರ್ದೇಶಕರಾಗಿ, ಕರ್ನಾಟಕ ಹೌಸಿಂಗ್ ಬೋರ್ಡ್ ಮಾಜಿ ಅಧ್ಯಕ್ಷರಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಯಾಗಿ ಸೇವೆ ಸಲ್ಲಿಸಿದ್ದರು.
ಹವಳ್ಳಿ ಕೃಷ್ಣೇಗೌಡ, ಚಿತ್ರದುರ್ಗ ಸಂಸದ ಚಂದ್ರಪ್ಪ, ಮೊಯಿದ್ದೀನ್ ಸೇಟ್, ಮೋಟಮ್ಮ, ಕೃಷ್ಣೇಗೌಡ, ವಾಜೀದ್, ಚಂದ್ರೇಗೌಡ ಮತ್ತಿತರರ ಬೆಂಬಲದೊಂದಿಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು.
ಪಕ್ಷಕ್ಕೆ ಮರಳಿದ ಜಿ.ಎಚ್.ಹಾಲಪ್ಪಗೌಡ ಅವರನ್ನು ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೂಗುಚ್ಛ ನೀಡಿ ಬರಮಾಡಿಕೊಂಡಿದ್ದಾರೆ.