ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆಯೇ ವಿನಹ ಅನರ್ಹಗೊಳಿಸಿಲ್ಲ: ಡಿ.ಸಿ.ಗೌರಿಶಂಕರ್
ತುಮಕೂರು: ಜನರಿಗೆ ಅಮಿಷವೊಡ್ಡಿ ವಾಮಮಾರ್ಗದಲ್ಲಿ ಚುನಾವಣೆ ಗೆಲುವು ಸಾಧಿಸಿದ್ದಾರೆ. ಎಂಬ ಬಿಜೆಪಿ ಪಕ್ಷದ ಮಾಜಿ ಶಾಸಕರ ದೂರನ್ನು ಹೈಕೋರ್ಟ್ ಭಾಗಶ: ಒಪ್ಪಿಕೊಂಡಿದ್ದು, ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆಯೇ ವಿನಹ, ಅನರ್ಹಗೊಳಿಸಿಲ್ಲ. ಮಾಜಿ ಶಾಸಕರು ನ್ಯಾಯಾಲಯದ ಆದೇಶವನ್ನು ತಪ್ಪಾಗಿ ಅರ್ಥೈಸಿ ಗ್ರಾಮಾಂತರ ಕ್ಷೇತ್ರದ ಜನರಲ್ಲಿ ಗೊಂದಲ ಉಂಟು ಮಾಡುತಿದ್ದಾರೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದ್ದಾರೆ.
ಬಳ್ಳಗೆರೆಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೈಕೋರ್ಟ್ ಚುನಾವಣಾ ಅಕ್ರಮದ ಕುರಿತಂತೆ ತೀರ್ಪನ್ನು ನೀಡಿದ್ದು, ತೀರ್ಪಿನಲ್ಲಿ ಎಲ್ಲಿಯೂ ಸಹ ಶಾಸಕ ಸ್ಥಾನದಿಂದ ನಮ್ಮನ್ನು ಅನರ್ಹಗೊಳಿಸಿರುವ ಉಲ್ಲೇಖವಿಲ್ಲ. ಶಾಸಕರು ಎಲ್ಲಿಯೂ ಸಹ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಹೆಸುಸಿಲ್ಲ. ನನ್ನ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಅಕ್ರಮ ನಡೆಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ನನ್ನ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದೆ ಎಂದರು.
ಮಾಜಿ ಶಾಸಕ ಸುರೇಶ್ ಗೌಡ ಹೈಕೋರ್ಟ್ ತೀರ್ಪಿನ ದೃಢೀಕೃತ ಪ್ರತಿ ಕೈಗೆ ಸಿಗುವ ಮೊದಲೇ ನನ್ನ ಮೇಲೆ ಆರೋಪ ಮಾಡಿ, ತಾವು ಸತ್ಯ ಹರಿಶ್ಚಂದ್ರನಂತೆ ಮಾತನಾಡಿದ್ದು, ಅವರು ಶಾಸಕರಾಗಿದ್ದಾಗ ಮಾಡಿರುವ ಭೂ ಹಗರಣದ ಬಗ್ಗೆ ಈಗಾಗಲೇ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿವೆ. ಅವರ ಮೇಲೆ ಐಪಿಸಿ ಕಲಂ 420 ಕೇಸು ನಡೆಯುತ್ತಿದೆ. ಸೋಲಿನ ಭೀತಿಯಿಂದ ಅವರು ತಮ್ಮ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದು, ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಚುನಾವಣಾ ಅಕ್ರಮಗಳು ನಡೆದಾಗ ಮಾಜಿ ಶಾಸಕರು ನೇರ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತು. ಆಗ ದೂರು ನೀಡದ ವ್ಯಕ್ತಿ ತಾವು ಸೋತಾಗ ಅದನ್ನು ಸಹಿಸಿಕೊಳ್ಳಲಾಗದೆ ನ್ಯಾಯಾಲಯದ ಮೊರೆ ಹೋದರು. ಅವರಿಗೆ ಅಷ್ಟು ಬದ್ಧತೆ ಇದ್ದಿದ್ದರೆ, ಅಂದೇ ಚುನಾವಣಾ ಆಯೋಗಕ್ಕೆ ದೂರು ಉಪಸ್ಥಿತರಿದ್ದರು. ನೀಡಬೇಕಿತ್ತು ಎಂದರು.
ಗ್ರಾಮಾಂತರ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗಿದ್ದು, ಇದರಲ್ಲಿ ಯಾವುದೇ ಗೊಂದಲ ಬೇಡ, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದ ಮತ ದಾರರು ನನಗೆ ಆಶೀರ್ವದಿಸಲಿದ್ದಾರೆ. ಅನಿತಾ ಕುಮಾರಸ್ವಾಮಿಯವರು ಅಭ್ಯರ್ಥಿಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನೇ ಅಭ್ಯರ್ಥಿ ಎಂದ ಮೇಲೆ ಬೇರೆ ಅಭ್ಯರ್ಥಿ ಬರುವ ಪ್ರಶ್ನೆಯಿಲ್ಲ. ಜಿಲ್ಲೆಗೆ ದೇವೇಗೌಡರ ಕುಟುಂಬ ದವರು ಯಾರೂ ಸಹ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ವಕ್ತಾರ ಡಾ.ಹಾಲನೂರು ಲೇಪಾಕ್ಷ, ಬೆಳಗುಂಬ ವೆಂಕಟೇಶ್, ಹಾಲನೂರು ಅನಂತ್, ನಡುಗನಹಳ್ಳಿ ಮಂಜುನಾಥ್, ಹಿರೇಹಳ್ಳಿ ಮಹೇಶ್, ಹೆತ್ತೇನಹಳ್ಳಿ ಮಂಜುನಾಥ್, ಟಿ.ಆರ್.ನಾಗರಾಜು, ವಿಷ್ಣುವರ್ಧನ್, ನಾಗವಲ್ಲಿ ದೀಪಕ್ ಇತರರಿದ್ದರು.