ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ: ಜಗದೀಶ್ ಶೆಟ್ಟರ್
"ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರಿಗೆ ಹೋಗಿ ನಿರ್ಧಾರ ಮಾಡುತ್ತೇನೆ"
ಹುಬ್ಬಳ್ಳಿ: ಬಿಜೆಪಿಗೆ ರಾಜಿನಾಮೆ ನೀಡಿರುವ ವರದಿಯನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿರಾಕರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಶೆಟ್ಟರ್, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಆದರೆ, ನಾನಿನ್ನೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.
ಇನ್ನೂ ಕೆಲವರ ಜೊತೆ ಮಾತುಕತೆ ನಡೀತಿದೆ. ಬೆಂಗಳೂರಿಗೆ ಹೋಗಿ ನಾನು ಕೆಲವರ ಜೊತೆ ಚರ್ಚೆ ಮಾಡಬೇಕಿದೆ. ಬೆಂಗಳೂರಿನಲ್ಲಿ ನನ್ನ ಅಂತಿಮ ತೀರ್ಮಾನ ಎಂದು ಶೆಟ್ಟರ್ ತಿಳಿಸಿದ್ದಾರೆ.
ನಾನು ಬಿಜೆಪಿ ಶಾಸಕನಾಗಿ ಪಕ್ಷೇತರ ಸ್ಪರ್ಧೆ ಮಾಡುವುದು ಕಷ್ಟ ಆಗುತ್ತಿತ್ತು. ಹೀಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.
ಸಂಘದ ಕೆಲವು ಹಿರಿಯರು ನನ್ನ ಜೊತೆ ಮಾತಾಡಿದ್ದಾರೆ. ಹೆಲಿಕ್ಯಾಪ್ಟರ್ ನಮ್ಮ ಹಿರಿಯರದ್ದು. ಶ್ಯಾಮನೂರ ಗಣೇಶ್ ಅವರು ಹೆಲಿಕ್ಯಾಪ್ಟರ್ ಕಳಿಸಿದ್ದಾರೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ನಾನು ಟಿಕೆಟ್ ಕೊಡಿ ಎಂದಿದ್ದೇನೆ. ನೋಡೋಣ ಅದು ಬಂದರೆ ಬರಲಿ ಎಂದ ಶೆಟ್ಟರ್, ಎರಡು ಬಾರಿ ನನಗೆ ಅವಕಾಶ ಸಿಕ್ಕಾಗಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಪಕ್ಷ ನನಗೆ ಎಲ್ಲ ಅವಕಾಶ ಕೊಟ್ಟಿದೆ, ಇದಕ್ಕೆ ಪ್ರತಿಯಾಗಿ ನಾನು ಪಕ್ಷ ಕಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಅವರು ಇಂದು ಸುದ್ದಿಗೋಷ್ಟಿ ನಡೆಸಿ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್, "ಯಡಿಯೂರಪ್ಪ ನಮ್ಮ ನಾಯಕರು. ಪಕ್ಷದಲ್ಲಿ ಎಲ್ಲಾ ಸ್ಥಾನಮಾನ ತೆಗೆದುಕೊಂಡ ಅವರು ಪಕ್ಷ ಒಡೆದು ಕೆಜೆಪಿ ಯಾಕೆ ಕಟ್ಟಿದರು ಎಂದು ಅವರು ಪ್ರಶ್ನಿಸಿದ್ದಾರೆ.
“ನನಗೆ ಅಪಮಾನ ಆಗಿದೆ, ನಾನು ಅದರ ಬಗ್ಗೆ ಮಾತಾಡ್ತೀನಿ. ನಾನು ಪಕ್ಷದ ಮೇಲೆ ಭರವಸೆ ಕಳೆದುಕೊಂಡಿದ್ದೇನೆ, ಅದಕ್ಕೆ ಹಂತ ಹಂತವಾಗಿ ಹೆಜ್ಜೆ ಇಡುತ್ತಿದ್ದೇನೆ, ಕಾಂಗ್ರೆಸ್ ಸೇರ್ಪಡೆ ಬಗ್ಗೆ ಬೆಂಗಳೂರಿಗೆ ಹೋಗಿ ನಿರ್ಧಾರ ಮಾಡುತ್ತೇನೆ" ಎಂದು ಶೆಟ್ಟರ್ ಹೇಳಿದ್ದಾರೆ.