ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಗೆ ಪ್ರಶ್ನೆಗಳ ಸುರಿಮಳೆಗೈದ ಈಶ್ವರಪ್ಪ
ಶಿವಮೊಗ್ಗ, ಏ.17: ಟಿಕೆಟ್ ಸಿಗದೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹಿರಿಯ ನಾಯಕ ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೆ.ಎಸ್ ಈಶ್ವರಪ್ಪ ಅವರು, ಕೇವಲ ಒಂದು ಚುನಾವಣಾ ಟಿಕೆಟ್ಗಾಗಿ ನಿಮ್ಮೆಲ್ಲ ಸಿದ್ಧಾಂತಗಳು ಬದಲಾಗಿ ಹೋದವಾ? ನೀವು ಇನ್ನು ಗೋಹತ್ಯೆಯನ್ನು ಬೆಂಬಲಿಸುತ್ತೀರಾ? ಪಿಎಫ್ಐಯನ್ನು ಒಪ್ಪುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರು ಹೋರಾಟದ ಭೂಮಿಯಿಂದ ಬಂದವರು. ಅಂತಹ ಭೂಮಿಯಿಂದ ಬಂದವರು ಕಾಂಗ್ರೆಸ್ ಗೆ ಸೇರಿದ್ದಾರೆ. ಹೋರಾಟ ನಿಮಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ನಿಮಗೆ ಒಂದು ಟಿಕೆಟ್ ಕೊಟ್ಟಿರಬಹುದು. ಆದರೆ ಹೋರಾಟದ ಮಣ್ಣಿನಲ್ಲಿ ನೀವು ಗೆಲ್ಲುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂತು ಅಂದುಕೊಳ್ಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಗೋಹತ್ಯೆ ಬಿಲ್ ಹಿಂಪಡೆಯುತ್ತೇವೆ ಅಂದಿದ್ದಾರೆ. ನೀವು ಅದನ್ನು ಬೆಂಬಲಿಸುತ್ತೀರಾ, ಒಂದು ಟಿಕೆಟ್ ನಿಮ್ಮ ಇಡೀ ಸಿದ್ಧಾಂತವನ್ನೇ ಬದಲು ಮಾಡಿತಾ ಎಂದು ಕೇಳಿದರು.
ಅಧಿಕಾರಕ್ಕೆ ಬಂದ್ರೆ ಪಿಎಫ್ಐ ವಿರುದ್ಧದ ನಿಷೇಧ ಹಿಂಪಡೆಯುತ್ತೇವೆ ಎಂದು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾದ್ರೆ ನೀವು ಭಯೋತ್ಪಾದನೆಯನ್ನು ಬೆಂಬಲಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಕೇವಲ ಅಧಿಕಾರಕ್ಕಾಗಿ ನೀವು ಕಾಂಗ್ರೆಸ್ ಸೇರ್ತೀರಿ ಅಂದಿದ್ದರೆ ಪಕ್ಷ ನಿಮ್ಮನ್ನು ಇಷ್ಟು ಬೆಳೆಸುತ್ತಿರಲಿಲ್ಲ. ವಿಪಕ್ಷ ನಾಯಕ, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ ಮಾಡಿತು. ಇನ್ನೇನು ಮಾಡಬೇಕು. ಚೆನ್ನಾಗಿ ನಡೆಸಿಕೊಂಡಿಲ್ಲ ಅಂದ್ರೆ ಅರ್ಥ ಏನು. ಸಾಮಾನ್ಯ ಕಾರ್ಯಕರ್ತ ಯಾರ ಮೇಲೆ ಭರವಸೆ ಇಟ್ಟುಕೊಳ್ಳಬೇಕು ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಟಿಕೆಟ್ ಕೊಟ್ಟ ಕೂಡಲೇ ನೀವೇನೂ ಗೆಲ್ಲುವುದಿಲ್ಲ. ಅದನ್ನು ಕ್ಷೇತ್ರದ ಜನತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಸೇರ್ಪಡೆಯಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಯ ಆತ್ಮಕ್ಕೆ ಶಾಂತಿ ಸಿಗುತ್ತದಾ.ಬಿಜೆಪಿಗೆ ಇಷ್ಟೆಲ್ಲಾ ಕೆಲಸ ಮಾಡಿದ್ರಿ. ಕಾಂಗ್ರೆಸ್ಗೆ ಏಕೆ ಸೇರಿದ್ರಿ ಅಂತಾ ನಿಮ್ಮ ಮೊಮ್ಮಗ ಕೇಳಿದ್ರೆ ಏನು ಹೇಳ್ತಿರಾ.ಅವನು ಸಹ ಛೀ ಥೂ ಅಂತಾನೆ ಎಂದ ಅವರು,ಕಾಲ ಈಗಲೂ ಮಿಂಚಿಲ್ಲ ಕ್ಷಮಾಪಣೆ ಕೇಳಿ ಮತ್ತೆ ಬಿಜೆಪಿಗೆ ಬನ್ನಿ ಎಂದರು.
ನಾನು ಶೆಟ್ಟರ್ ಅವರಿಗೆ ಬಹಿರಂಗ ಪತ್ರ ಬರೆಯುತ್ತೇನೆ. ನನ ಪತ್ರಕ್ಕೆ ಅವರು ಉತ್ತರ ಕೊಡಬೇಕು. ಕೇವಲ ಒಂದು ಶಾಸಕ ಟಿಕೇಟ್ ಮುಖ್ಯವಲ್ಲ, ಸಂಸ್ಕಾರ ಕೊಟ್ಟವರು ಇಂತಹ ವ್ಯಕ್ತಿಗೆ ಸಂಸ್ಕಾರ ಕೊಟ್ಟೆವಲ್ಲಾ ಅಂತಾ ಯೋಚನೆ ಮಾಡ್ತಾರೆ. ನಾನು ಬಹಿರಂಗ ಪತ್ರ ಬರೆದಾಗ ನಿಮಗೆ ನೋವು ಆಗಬಹುದು ಎಂದರು.
ಧರ್ಮೇಂದ್ರ ಪ್ರಧಾನ್ ಅವರು ಈಶ್ವರಪ್ಪನವರೇ ನೀವು ನಿವೃತ್ತಿ ತಗೋಬೇಕು ಅಂತಾ ಫೋನ್ ಮಾಡಿ ಹೇಳಿದ್ರು. ಅವರು ಫೋನ್ ಮಾಡಿದ 10ನಿಮಿಷಕ್ಕೆ ನಾನು ಪತ್ರ ಬರೆದೆ. ನಿವೃತ್ತಿ ತಗೋಬೇಕು ಅಂದಾಗ ಶೆಟ್ಟರ್ ಅವರ ಜೊತೆ ಮಾತನಾಡಿದ್ದೆ. ಟಿಕೆಟ್ ಕೊಡಬೇಕು ಅಂತಾ ಲಕ್ಷ ಲಕ್ಷ ಕಾರ್ಯಕರ್ತರು ಇದ್ದಾರೆ.ನಿಮಗೇ ಏಕೆ ಟಿಕೆಟ್ ಕೊಡಬೇಕು ಯಾರಿಗೆ ಟಿಕೆಟ್ ಕೊಡಬೇಕು, ಏಕೆ ಕೊಡಬೇಕು ಅಂತಾ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷದ ಹಿರಿಯರು ನಮಗಿಂತ ಬುದ್ಧಿವಂತರು ಇದ್ದಾರೆ ಅಂತ ಹೇಳಿದ್ದೆ. ಅವರು ರಾಜೀನಾಮೆ ನೀಡಿದ್ದು ನನಗೆ ಆಘಾತವಾಗಿದೆ ಎಂದರು.
ಲಕ್ಷ್ಮಣ ಸವದಿ ರಾಜೀನಾಮೆ ಕೊಟ್ಟಾಗ ನನಗೆ ಬೇಸರವಾಗಲಿಲ್ಲ. ಅವರು ಸಂಘ ಪರಿವಾರದಿಂದ ಬಂದವರಲ್ಲ, ಹಾಗಾಗಿ ಅವರ ಬಗ್ಗೆ ನಾನು ಅಷ್ಟು ಮಾತನಾಡುವುದಿಲ್ಲ. ಶೆಟ್ಟರ್ ಸಂಘ ಪರಿವಾರದಿಂದ ಬಂದವರು. ಹಾಗಾಗಿಅವರು ಪಕ್ಷ ಬಿಟ್ಟಿದ್ದು ನೋವಾಯ್ತು. ಅವರು ವಾಪಸ್ ಬಂದರೆ ಬಹಳ ಸಂತೋಷ, ಇಲ್ಲದಿದ್ದರೆ ನೋವಾಗುತ್ತದೆ ಎಂದರು.
ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಕಾಂಗ್ರೆಸ್ ಕೋಲಾರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿತು. ವರುಣದಲ್ಲಿ ಬಿಜೆಪಿ ಸಿದ್ದರಾಮಯ್ಯ ಅವರನ್ನು ಸೋಲಿಸುತ್ತದೆ ಎಂದಿರುವ ಈಶ್ವರಪ್ಪ, ಕಾಂಗ್ರೆಸ್ನಲ್ಲೇ ಹಲವು ಗುಂಪುಗಳು ಇವೆ. ಜಗದೀಶ್ ಶೆಟ್ಟರ್ ಯಾವ ಗುಂಪಿಗೆ ಹೋಗ್ತಾರೋ ಗೊತ್ತಿಲ್ಲ ಎಂದರು.
ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದಿದ್ದೇನೆ. ಈ ಬಗ್ಗೆ ಅವರಿಗೆ ಈಗಾಗಲೇ ಪತ್ರ ಬರೆದಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾನು ಬದ್ಧ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಎಸ್. ಜ್ಞಾನೇಶ್ವರ್, ಡಾ. ಧನಂಜಯ ಸರ್ಜಿ, ಸುನೀತಾ ಅಣ್ಣಪ್ಪ, ಜಗದೀಶ್ ಮತ್ತಿತರರು ಇದ್ದರು.