ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಕಾಮಗಾರಿ ನಿರ್ವಹಣೆ: ಮೂವರು ಇಂಜಿನಿಯರ್ ಗಳ ಅಮಾನತು
ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚಾಮರಾಜ ಕ್ಷೇತ್ರದ ವಾಡ್೯ ನಂ. 42 ರಲ್ಲಿ ಕಾಮಗಾರಿ ನಿರ್ವಹಣೆ ಯಾಗುತ್ತಿರುವುದರಿಂದ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಲಾಗಿದೆ ಎಂದು ಮೂವರು ಇಂಜಿನಿಯರ್ ಗಳನ್ನು ಅಮಾನತ್ತು ಮಾಡಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚಾಮರಾಜ ವಿಧಾನಸಭಾ ಕ್ಷೇತ್ರದ ವಾಡ್೯ ನಂ.42 ರಲ್ಲಿ ಕಾಮಗಾರಿ ಮುಂದುವರೆಯುತ್ತಿರುವ ಬಗ್ಗೆ ಸಂಬಂಧ ಪಟ್ಟ ಎಇಇ ನಾಗರಾಜು, ಎಇ ವರುಣ್, ಜೆಇ ಚಂದ್ರಮೋಹನ್ ಅವರಿಗೆ ಲಿಖಿತ ಹೇಳಿಕೆ ನೀಡಲು ಸೂಚಿಸಲಾಗಿತ್ತು.
ಆದರೆ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯೂ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಪೂರ್ವದಲ್ಲಿ ಪ್ರಾರಂಭವಾಗಿರುವ ಕಾಮಗಾರಿ ತಾಂತ್ರಿಕ ದೋಷಗಳಿಂದ ಸ್ಥಗಿತಗೊಂಡಿತ್ತು. ಹಾಗಾಗಿ ಸದರಿ ಕಾಮಗಾರಿಯನ್ನು ಮುಂದುವರೆಸುತ್ತಿರುವುದಾಗಿ ತಿಳಿಸಿದ್ದರು.
ಆದರೆ ಈ ಹೇಳಿಕೆ ಸಮಂಜಸವಾಗಿಲ್ಲ ಎಂದು ಹಾಗೂ ಉಲ್ಲೇಖಿಸಿರುವ ಕಾಮಗಾರಿ ಬಗ್ಗೆ ಕೂಲಂಕುಷ ಪರಿಶೀಲನೆಗೆ ಒಳಪಡಿಸುವುದು ಅಗತ್ಯವಿದೆ ಎಂದು 1951 ರ ಪ್ರಜಾ ಪ್ರಾತಿನಿಧ್ಯ ಅದಿನಿಯಮದಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಎಇಇ ನಾಗರಾಜು, ಎಇ ವರುಣ್ ಹಾಗೂ ಜೆಇ ಚಂದ್ರಮೋಹನ್ ಇವರುಗಳನ್ನು ಇಲಾಖಾ ವಿಚಾರಣೆಗೆ ಇಳಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.