ಮಂಡ್ಯ | ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ; ಕೊಲೆಯಲ್ಲಿ ಅಂತ್ಯ
ಮಂಡ್ಯ, ಮೇ 26: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಸಂಬಂಧ ನಡೆದ ಜಗಳದಲ್ಲಿ ಯುವಕನೊಬ್ಬ ಕೊಲೆಯಾಗಿರುವ ಘಟನೆ ಮದ್ದೂರು ತಾಲೂಕಿನ ಬೋರಾಪುರ ಗೇಟ್ ಬಳಿ ಗುರುವಾರ ತಡರಾತ್ರಿ ನಡೆದಿದೆ.
ಕೊಲೆಯಾದ ಯುವಕ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆ ಗ್ರಾಮದ ರಾಜೇಂದ್ರ ಅವರ ಪುತ್ರ ಪುನೀತ್(25) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾದ ಯುವಕ ಪುನೀತ್ ಮತ್ತು ಆತನ ಕೆಲವು ಸ್ನೇಹಿತರು ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದು, ಪುನೀತ್ ಗೆದ್ದ ಹಣವನ್ನು ಕೇಳಿದ ಕಾರಣಕ್ಕೆ ಆತನನ್ನು ಕೊಲೆಗೈಯ್ಯಲಾಗಿದೆ ಎಂದು ಆರೋಪಿಸಲಾಗಿದೆ.
ಬೆಟ್ಟಿಂಗ್ ಹಣ ನೀಡುವುದಾಗಿ ಬೋರಾಪುರ ಗೇಟ್ ಬಳಿಗೆ ಪುನೀತ್ನನ್ನು ಬರಮಾಡಿಕೊಂಡ ಆತನ ಗೆಳೆಯರು, ನಂತರ ಜಗಳ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾದರೆನ್ನಲಾಗಿದೆ.
ಗಾಯಗೊಂಡಿದ್ದ ಪುನೀತ್ನನ್ನು ಆತನ ಕೆಲ ಸ್ನೇಹಿತರು ಸಮೀಪದ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಸಾಗಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ.
ವಿಷಯ ತಿಳಿದ ಪೊಲೀಸರು ಘಟನೆ ನಡೆದ ತಡರಾತ್ರಿಯೇ ಕಾರ್ಯಾಚಣೆ ನಡೆಸಿ ಕೊಲೆ ಆರೋಪಿಗಳೆನ್ನಲಾದ ಮಂಜು, ಶರತ್, ಸತೀಶ್, ಸುಮಂತ್ ಸೇರಿದಂತೆ ಹತ್ತು ಮಂದಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.