ಇನ್ವೆಸ್ಟ್-ಕರ್ನಾಟಕ ಸಮಾವೇಶ; ಸಾರ್ವಜನಿಕರಿಗೆ ಇಂದು ಮುಕ್ತ ಪ್ರವೇಶ
ಬೆಂಗಳೂರು, ಫೆ. 4: ಬಂಡವಾಳ ಹೂಡಿಕೆದಾರರು, ಆಹ್ವಾನಿತ ಗಣ್ಯರಿಗಷ್ಟೇ ಸೀಮಿತವಾಗಿದ್ದ ‘ಇನ್ವೆಸ್ಟ್-ಕರ್ನಾಟಕ’ ಹೂಡಿಕೆದಾರರ ಸಮಾವೇಶ ಫೆ.5ರಂದು ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಲಿದೆ.
ಫೆ.5ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯ ವರೆಗೆ ಸಾರ್ವಜನಿಕರು ಯಾವುದೇ ಆಹ್ವಾನ ಪತ್ರ ಅಥವಾ ಬ್ಯಾಡ್ಜ್ ಇಲ್ಲದೆ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಏರ್ಪಡಿ ಸಲಾಗಿರುವ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಕೃಷಿ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಆಟೋ ಮೊಬೈಲ್, ಸಿದ್ಧ ಉಡುಪು ಹಾಗೂ ಸಾಫ್ಟ್ವೇರ್ ತಂತ್ರಜ್ಞಾನ ಸೇರಿದಂತೆ 500ಕ್ಕೂ ಹೆಚ್ಚು ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ದೇಶ-ವಿದೇಶಗಳ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ.
ಫೆ.3ರಿಂದ 5ರ ವರೆಗೆ ಮೂರು ದಿನಗಳ ಕಾಲ ಇನ್ವೆಸ್ಟ್ ಕರ್ನಾಟಕ ಹೂಡಿಕೆದಾರರ ಸಮಾವೇಶವನ್ನು ಏರ್ಪಡಿಸಲಾಗಿತ್ತಾದರೂ, ಕೊನೆಯ ದಿನ ಯಾವುದೇ ಸಭೆ, ಸಮಾರಂಭ, ವಿಚಾರ ಸಂಕಿರಣಗಳನ್ನು ಏರ್ಪಡಿಸಿಲ್ಲ. ಬದಲಿಗೆ, ಹೂಡಿಕೆದಾರರಿಗೆ ‘ಹೂಡಿಕೆ ಹಾಗೂ ಪ್ರವಾಸೋದ್ಯಮ ತಾಣ’ಗಳ ಪರಿಚಯಿಸಲು ಕರೆದೊಯ್ಯುವ ಹಿನ್ನೆಲೆಯಲ್ಲಿ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಬಂಡವಾಳ ಹೂಡಿಕೆ ಸಮಾವೇಶವನ್ನು ವಿದ್ಯಾರ್ಥಿಗಳು ವೀಕ್ಷಿಸಲು, ಅವರಲ್ಲಿ ಹೊಸ ಆವಿಷ್ಕಾರ, ಆಲೋಚನೆ ಮೂಡಲು ಸಹಕಾರಿಯಾಗುತ್ತದೆಂಬ ಕಾರಣದಿಂದ ರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ 2 ದಿನ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.