ಖೋಟಾ ನೋಟ್ ಪತ್ತೆ ಹಚ್ಚಿದ ವ್ಯಕ್ತಿಗೆ ಹಲ್ಲೆ ಯತ್ನ
ತುಮಕೂರು, ಜೂ. 11: ಖೋಟಾ ನೋಟುಗಳನ್ನು ನೀಡಿದ್ದನ್ನು ಪ್ರಶ್ನಿಸಿದ್ದಕ್ಕೆ ಅಂಗಡಿಯೊಂದರ ಮಾಲಕನ ಕಡೆಯವರು ಗ್ರಾಹಕನ ಮೇಲೆ ಹಲ್ಲೆಗೆ ಯತ್ನಿಸಿರುವ ಘಟನೆ ಪಾವಗಡ ತಾಲ್ಲೂಕು ವೈಎನ್ ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ರಾಹಕ ನಾಗೇಶ್ ಎಂಬಾತ ಇಲ್ಲಿನ ನ್ಯೂ ಪ್ರಾವಿಷನ್ ಸ್ಟೋರ್ನಲ್ಲಿ ಸಾಮಗ್ರಿ ಖರೀದಿಸಿದ್ದು, ಮಾಲಕ ದಾದಾಫೀರ್ ಆತನಿಗೆ ನೀಡಿದ್ದ ಹಣದಲ್ಲಿ ನೂರು ರೂ . ಖೋಟಾ ನೋಟು ಪತ್ತೆಯಾಗಿತ್ತು. ಈ ಬಗ್ಗೆ ನಾಗೇಶ್ ಅಂಗಡಿಯವನಿಗೆ ಪ್ರಶ್ನಿಸಿದಾಗ ದಾದಾಫೀರ್ ಮತ್ತು ಅವನ ಕಡೆಯವರು ನಾಗೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಸ್ಥಳೀಯರು ಆಕ್ರೋಶಗೊಂಡು ಅಂಗಡಿಗೆ ನುಗ್ಗಿ ತಪಾಸಣೆ ನಡೆಸಿದ್ದು, ಈ ವೇಳೆ 100 ರೂ ಮುಖ ಬೆಲೆಯ 2,000 ಖೋಟಾ ನೋಟು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಮಾಹಿತಿ ನೀಡಲು ಪೊಲೀಸ್ ಠಾಣೆಗೆ ಹೋದರೆ ಮಾಹಿತಿ ಕೊಟ್ಟವರನ್ನೇ ಪ್ರಶ್ನೆ ಮಾಡಿ ಅಂಗಡಿ ಮಾಲಕನ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಈ ಸಂಬಂಧ ಉನ್ನತ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.