ರಣಜಿಯಲ್ಲಿ ಮಾನವೀಯತೆ ಮರೆತ ದಿಲ್ಲಿ ಆಟಗಾರರು
ಇಂದೋರ್, ಜ.2: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ಬ್ಯಾಟ್ಸ್ಮನ್ ಬೌನ್ಸರ್ ತಾಗಿ ನೋವಿನಿಂದ ನರಳಾಡುತ್ತಾ ಮೈದಾನದಲ್ಲಿ ಕುಸಿದು ಬಿದ್ದಿದ್ದರೂ ದಿಲ್ಲಿ ಆಟಗಾರರು ಬ್ಯಾಟ್ಸ್ಮನ್ನತ್ತ ಸುಳಿಯದೇ ತಮ್ಮಷ್ಟಕ್ಕೆ ತಾವಿದ್ದೂ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ವರ್ತಿಸಿರುವ ಘಟನೆ ನಡೆದಿದೆ.
ಇನ್ಸ್ಟಾಗ್ರಾಮ್ನಲ್ಲಿ ‘ಬ್ಲೀಡ್.ಧೋನಿಸಂ’ ಎಂಬ ಹೆಸರಿನಲ್ಲಿ ಹಾಕಲಾಗಿರುವ ವಿಡಿಯೋದಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಬೌನ್ಸರ್ವೊಂದು ಅಪ್ಪಳಿಸಿದಾಗ ವಿದರ್ಭ ಬ್ಯಾಟ್ಸ್ಮನ್ ನೋವನ್ನು ತಾಳಲಾರದೇ ಮೈದಾನದಲ್ಲಿ ಕುಸಿದು ಬಿದ್ದರು. ಮತ್ತೊಂದು ತುದಿಯಲ್ಲಿ ಸಹ ಆಟಗಾರ ಡ್ರೆಸ್ಸಿಂಗ್ರೂಮ್ನತ್ತ ಸನ್ನೆ ಮಾಡಿ ವೈದ್ಯಕೀಯ ನೆರವು ಯಾಚಿಸಿದರು. ಇಷ್ಟೇಲ್ಲಾ ನಡೆಯುತ್ತಿದ್ದರೂ ದಿಲ್ಲಿ ಆಟಗಾರರು ಕುಸಿದುಬಿದ್ದ ಬ್ಯಾಟ್ಸ್ಮನ್ನನ್ನು ಮಾತನಾಡಿಸದೇ ಅವರದೇ ಲೋಕದಲ್ಲಿದ್ದರು. ಅಂಪೈರ್ಗಳು ಕೂಡ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ದಿಲ್ಲಿ ಆಟಗಾರರು ವರ್ತನೆ ಹಾಗೂ ಕ್ರೀಡಾಸ್ಫೂರ್ತಿಯ ಕೊರತೆಯನ್ನು ಎಲ್ಲರೂ ಟೀಕಿಸಿದ್ದಾರೆ. ಭಾರತದ ಮಾಜಿ ನಾಯಕ ಎಂ.ಎಸ್. ಧೋನಿಯವರಿಂದ ಕ್ರೀಡಾಸ್ಫೂರ್ತಿಯನ್ನು ಕಲಿಯಿರಿ ಎಂದು ವಿಕೆಟ್ಕೀಪರ್ ರಿಷಬ್ ಪಂತ್ ನೇತೃತ್ವದ ದಿಲ್ಲಿ ಆಟಗಾರರಿಗೆ ಕ್ರಿಕೆಟ್ ಅಭಿಮಾನಿಗಳು ಸಲಹೆ ನೀಡಿದ್ದಾರೆ.
..........