ಕಾಶ್ಮೀರ ತಂಡದಲ್ಲಿ ಲಡಾಖ್ನವರು ಪ್ರತಿನಿಧಿಸಬಹುದು: ವಿನೋದ್ ರಾಯ್
ಹೊಸದಿಲ್ಲಿ, ಆ.6: ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆಗೊಂಡಿದ್ದರೂ , ಲಡಾಖ್ಗೆ ಪ್ರತ್ಯೇಕ ಕ್ರಿಕೆಟ್ ಸಂಸ್ಥೆಯನ್ನು ರಚಿಸುವ ಇರಾದೆ ಬಿಸಿಸಿಐಗೆ ಇಲ್ಲ. ಲಡಾಖ್ನ ಆಟಗಾರರು ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿ ಆಡಬಹುದು ಎಂದು ಬಿಸಿಸಿಐ ಆಡಳಿತಗಾರರ ಸಮಿತಿಯ ಮುಖ್ಯಸ್ಥ ವಿನೋದ್ ರಾಯ್ ತಿಳಿಸಿದ್ದಾರೆ.
ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಜಮ್ಮು-ಕಾಶ್ಮೀರ ಪುನರಚನೆ ವಿಧೇಯಕ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಬಹುಮತದ ಆಧಾರದಲ್ಲಿ ಅಂಗೀ ಕರಿಸಲ್ಪಟ್ಟಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿ ಬಿಸಿಸಿಐನ ಸದಸ್ಯತ್ವ ಹೊಂದಿದೆ. ಅದೇ ರೀತಿ ಲಡಾಖ್ಗೂ ಇನ್ನು ಮುಂದೆ ಸದಸ್ಯತ್ವ ದೊರೆಯಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ವಿನೋದ್ ರಾಯ್ ಆ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.
ಚಂಡೀಗಢ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಅಲ್ಲಿನ ಆಟಗಾರರು ಪಂಜಾಬ್ ಅಥವಾ ಹರ್ಯಾಣ ತಂಡದ ಪರ ಆಡುತ್ತಿದ್ದಾರೆ. ಅದೇ ರೀತಿ ಲಡಾಖ್ನ ಆಟಗಾರರು ಜಮ್ಮು ಮತ್ತು ಕಾಶ್ಮೀರ ತಂಡದಲ್ಲಿ ಆಡಬಹುದು ಎಂದು ವಿನೋದ್ ರಾಯ್ ಹೇಳಿದರು.