ಸಚಿನ್ ಗಿಂತ ಕಾಂಬ್ಳಿ ಪ್ರತಿಭಾವಂತ . ಆದರೆ ... : ಕಪಿಲ್ ದೇವ್
ಪುಣೆ, ಮೇ.8; ಪ್ರತಿಭೆಯನ್ನು ಸ್ಟಾರ್ ಆಗಿ ಪರಿವರ್ತಿಸುವಲ್ಲಿ ಕುಟುಂಬ, ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಕೇವಲ ಪ್ರತಿಭೆಯಿದ್ದರೆ ಸಾಕಾಗದು. ಅದನ್ನು ಬೆಳೆಸುವ ಪೂರಕ ವಾತಾವರಣ ಸುತ್ತಮುತ್ತಲು ಇರಬೇಕು ಎಂದು ಕ್ರಿಕೆಟ್ ದಂತಕತೆ ಕಪಿಲ್ ದೇವ್ ಹೇಳಿದ್ದಾರೆ.
ಇಲ್ಲಿ ಆಯೋಜಿತ ಯಶಸ್ವಿ ಕ್ರೀಡಾಪಟುಗಳ ಹೆತ್ತವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ 1983 ರ ವಿಶ್ವ ಕಪ್ ಹೀರೋ ಕಪಿಲ್ ದೇವ್ ಇದಕ್ಕೆ ಸಚಿನ್ ಹಾಗು ವಿನೋದ್ ಕಾಂಬ್ಳಿ ಅವರ ಉದಾಹರಣೆ ಕೊಟ್ಟರು. " ಅವರಿಬ್ಬರು ಶಾಲಾ ಮಟ್ಟದಲ್ಲಿ ಒಟ್ಟಿಗೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಇಬ್ಬರೂ ಪ್ರತಿಭಾವಂತರಾಗಿದ್ದರು. ಕಾಂಬ್ಳಿ ಸಚಿನ್ ಗಿಂತ ಹೆಚ್ಚೇ ಪ್ರತಿಭೆ ಹೊಂದಿದ್ದರು. ಆದರೆ ಅವರ ಹಾಗು ಸಚಿನ್ ಅವರ ಕುಟುಂಬದ ವಾತಾವರಣ ಸಂಪೂರ್ಣ ಬೇರೆ ಬೇರೆಯಾಗಿತ್ತು. ಹಾಗಾಗಿ ಸಚಿನ್ 24 ವರ್ಷ ದೇಶವನ್ನು ಪ್ರತಿನಿಧಿಸಿದರೆ ಕಾಂಬ್ಳಿ ಬಹಳ ಬೇಗ ಮರೆಯಾಗಿಬಿಟ್ಟರು. ಅವರು ಆರಂಭದಲ್ಲಿ ಕಂಡ ಯಶಸ್ಸನ್ನು ಉಳಿಸಿಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ . ಹಾಗಾಗಿ ಕ್ರೀಡಾಳುಗಳಿಗೆ ಮನೆ, ತಂದೆ , ತಾಯಿ, ಸೋದರ -ಸೋದರಿಯರು, ಸ್ನೇಹಿತರು ಎಲ್ಲರ ಬೆಂಬಲ ಸಿಗಬೇಕು " ಎಂದು ಕಪಿಲ್ ಹೇಳಿದರು.