ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ
ಅಭಿಮನ್ಯು ಮಿಥುನ್ ಪಂದ್ಯಶ್ರೇಷ್ಠ
ಹುಬ್ಬಳ್ಳಿ, ಡಿ.20: ಕರ್ನಾಟಕ ಹಾಗೂ ಉತ್ತರಪ್ರದೇಶ ಮಧ್ಯೆ ನಡೆದ ರಣಜಿ ಟ್ರೋಫಿಯ ‘ಬಿ’ ಗುಂಪಿನ ಪಂದ್ಯ ಡ್ರಾನಲ್ಲಿ ಕೊನೆಯಾಗಿದ್ದು, ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಪಡೆದಿದ್ದ ಕರುಣ್ ನಾಯರ್ ನೇತೃತ್ವದ ಆತಿಥೇಯ ತಂಡ ಮೂರು ಅಂಕ ಪಡೆದಿದೆ. ನಾಲ್ಕನೇ ಹಾಗೂ ಕೊನೆಯ ದಿನವಾದ ಶುಕ್ರವಾರ 1 ವಿಕೆಟ್ ನಷ್ಟದಲ್ಲಿ 29 ರನ್ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಉತ್ತರಪ್ರದೇಶ ಪಂದ್ಯ ಡ್ರಾನಲ್ಲಿ ಕೊನೆಗೊಳ್ಳುವ ಮೊದಲು 69.1 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ 204 ರನ್ ಗಳಿಸಿದೆ. ಆರಂಭಿಕ ಆಟಗಾರ ಅಲ್ಮಾಸ್ ಶೌಕತ್ ಆಕರ್ಷಕ ಶತಕ(ಔಟಾಗದೆ 103, 210 ಎಸೆತ, 14 ಬೌಂಡರಿ, 1 ಸಿಕ್ಸರ್)ಸಿಡಿಸಿದರು. ಎಂ.ಕೌಶಿಕ್(45, 83 ಎಸೆತ, 8 ಬೌಂಡರಿ)ಹಾಗೂ ಅಕ್ಷದೀಪ್ನಾಥ್(38)ಎರಡಂಕೆಯ ಸ್ಕೋರ್ ಗಳಿಸಿದರು.
ಉತ್ತರಪ್ರದೇಶ ತಂಡ ಆರಂಭಿಕ ಆಟಗಾರ ಆರ್ಯನ್(0) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ 2ನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಗಳಿಸಿದ ಶೌಕತ್ ಹಾಗೂ ಕೌಶಿಕ್ ತಂಡವನ್ನು ಆಧರಿಸಿದರು. ಕೌಶಿಕ್ ಔಟಾದ ಬಳಿಕ ಶೌಕತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ ಎಡಿ ನಾಥ್ರೊಂದಿಗೆ 77 ರನ್ ಸೇರಿಸಿದರು. ಕರ್ನಾಟಕದ ಪರವಾಗಿ ಮಥಾಯಸ್(1-27), ರೋನಿತ್ ಮೋರೆ(1-52) ಹಾಗೂ ಎಸ್.ಗೋಪಾಲ್(1-61)ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಕರ್ನಾಟಕದ ಪರ ಮೊದಲ ಇನಿಂಗ್ಸ್ ನಲ್ಲಿ 60 ರನ್ಗೆ ಆರು ವಿಕೆಟ್ಗಳನ್ನು ಕಬಳಿಸಿದ ಅಭಿಮನ್ಯು ಮಿಥುನ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ವಿದರ್ಭ, ಒಡಿಶಾ, ಸೌರಾಷ್ಟ್ರಕ್ಕೆ ಇನಿಂಗ್ಸ್ ಜಯ: ಹಾಲಿ ಚಾಂಪಿಯನ್ ವಿದರ್ಭ, ಒಡಿಶಾ ಹಾಗೂ ಸೌರಾಷ್ಟ್ರ ತಂಡಗಳು ರಣಜಿ ಟ್ರೋಫಿಯ ಎರಡನೇ ಸುತ್ತಿನ ಪಂದ್ಯದ ಕೊನೆಯ ದಿನವಾದ ಶುಕ್ರವಾರ ಇನಿಂಗ್ಸ್ ಅಂತರದಿಂದ ಜಯ ಸಾಧಿಸಿವೆ. ವಿದರ್ಭ ತಂಡ ರಾಜಸ್ಥಾನವನ್ನು ಇನಿಂಗ್ಸ್ ಹಾಗೂ 60 ರನ್ಗಳ ಅಂತರದಿಂದ ಮಣಿಸಿತು. ರಾಜಸ್ಥಾನವನ್ನು ಎರಡನೇ ಇನಿಂಗ್ಸ್ನಲ್ಲಿ 190 ರನ್ಗೆ ನಿಯಂತ್ರಿಸಿದ ವಿದರ್ಭ ಇನಿಂಗ್ಸ್ ಗೆಲುವು ದಾಖಲಿಸಿ 7 ಬೋನಸ್ ಅಂಕ ಗಳಿಸಿತು.
ಒಡಿಶಾ ತಂಡ ಸರ್ವಿಸಸ್ ತಂಡವನ್ನು ಇನಿಂಗ್ಸ್ ಹಾಗೂ 31 ರನ್ಗಳಿಂದ ಸೋಲಿಸಿತು. ಸರ್ವಿಸಸ್ ತಂಡ ಎರಡನೇ ಇನಿಂಗ್ಸ್ ನಲ್ಲಿ 238 ರನ್ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಒಡಿಶಾದ ರಾಜೇಶ್ ಮೊಹಾಂತಿ (3-44)ಹಾಗೂ ಅಭಿಷೇಕ್ ರಾವತ್(3-47)ಆರು ವಿಕೆಟ್ಗಳನ್ನು ಹಂಚಿಕೊಂಡರು. ಸೌರಾಷ್ಟ್ರ ತಂಡ ರೈಲ್ವೇಸ್ ತಂಡವನ್ನು ಇನಿಂಗ್ಸ್ ಹಾಗೂ 90 ರನ್ಗಳ ಅಂತರದಿಂದ ಮಣಿಸಿತು. ರೈಲ್ವೇಸ್ ತಂಡ ಎರಡನೇ ಇನಿಂಗ್ಸ್ನಲ್ಲಿ 141 ರನ್ಗೆ ಸರ್ವಪತನಗೊಂಡಿತು. ಸೌರಾಷ್ಟ್ರದ ನಾಯಕ ಜಯದೇವ್ ಉನದ್ಕಟ್ 23 ರನ್ಗೆ ಆರು ವಿಕೆಟ್ಗಳನ್ನು ಪಡೆದು ಮಿಂಚಿದರು. ಛತ್ತೀಸ್ಗಢ ತಂಡ ಉತ್ತರಾಖಂಡ ತಂಡವನ್ನು ಇನಿಂಗ್ಸ್ ಹಾಗೂ 65 ರನ್ಗಳಿಂದ ಮಣಿಸಿ ಏಳಂಕವನ್ನು ಬಾಚಿಕೊಂಡಿತು. ಆಂಧ್ರ ತಂಡ ದಿಲ್ಲಿ ತಂಡವನ್ನು 9 ವಿಕೆಟ್ಗಳ ಅಂತರದಿಂದ ಮಣಿಸಿತು. ಈ ಮೂಲಕ ಆರಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿತು. ಅರುಣಾಚಲ ಪ್ರದೇಶ-ಮಿರೆರಾಂ ಪಂದ್ಯ ಹಾಗೂ ಕರ್ನಾಟಕ-ಉತ್ತರಪ್ರದೇಶ ನಡುವಿನ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು.