ಆಸ್ಪತ್ರೆಯಿಂದ ಬಿಡುಗಡೆಯಾದ ಸೌರವ್ ಗಂಗುಲಿ
ಕೋಲ್ಕತಾ: ತಾನು ಚಿಕಿತ್ಸೆ ಪಡೆಯುತ್ತಿದ್ದ ವುಡ್ ಲ್ಯಾಂಡ್ಸ್ ಹಾಸ್ಪಿಟಲ್ ನಿಂದ ಬಿಡುಗಡೆಯಾಗಿ ಗುರುವಾರ ಮನೆಗೆ ವಾಪಸಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ, ನನಗೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಅನುಭವವಾಗುತ್ತಿದೆ ಎಂದರು.
ಎದೆ ನೋವಿನೊಂದಿಗೆ ಆಸ್ಪತ್ರೆಗೆ ದಾಖಲಾದ ಬಳಿಕ ಆ್ಯಂಜಿಯೋಪ್ಲಾಸ್ಟಿಗೆ ಒಳಗಾಗಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಗಂಗುಲಿ ಅವರು ತನಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಿರುವ ವೈದ್ಯರಿಗೆ ಧನ್ಯವಾದ ಹೇಳಿದರು. “ನಾನೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವೆ. ನನ್ನೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಶೀಘ್ರವೇ ಸಿದ್ದನಾಗುವ ವಿಶ್ವಾಸವಿದೆ’’ ಎಂದು ಆಸ್ಪತ್ರೆಯ ಹೊರಗೆ ಸುದ್ದಿಗಾರರಿಗೆ ಗಂಗುಲಿ ತಿಳಿಸಿದರು.
ಶನಿವಾರ ಲಘು ಹೃದಯಾಘಾತಕ್ಕೀಡಾಗಿದ್ದ ಗಂಗುಲಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರು. ಐದು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಅವರು ಇಂದು ಮನೆಗೆ ವಾಪಸಾಗಿದ್ದಾರೆ.
ಗಂಗುಲಿಗೆ ಚಿಕಿತ್ಸೆಗೆ ನೀಡಿರುವ ವೈದ್ಯರು ಗಂಗುಲಿಯವರ ಆರೋಗ್ಯದ ಮೇಲೆ ನಿರಂತರ ಜಾಗೃತೆ ವಹಿಸಲಿದ್ದಾರೆ. ಸಮಯಕ್ಕೆ ಸರಿಯಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.