ಮೂರನೇ ಟ್ವೆಂಟಿ-20ಯಲ್ಲಿ ಶ್ರೀಲಂಕಾ ಜಯಭೇರಿ, ಸರಣಿ ಕೈವಶ
ಶಿಖರ್ ಧವನ್ ಬಳಗದ ಬ್ಯಾಟಿಂಗ್ ವೈಫಲ್ಯ
photo: twitter/@ICC
ಕೊಲಂಬೊ: ಧನಂಜಯ ಡಿಸಿಲ್ವಾ(ಔಟಾಗದೆ 23) ಹಾಗೂ ಮಿನೊದ್ ಭಾನುಕ(18) ಸಾಂದರ್ಭಿಕ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡವು ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯವನ್ನು 7 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿತು. ಈ ಮೂಲಕ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿತು.
ಸುಲಭ ಸವಾಲು ಬೆನ್ನಟ್ಟಿದ ಶ್ರೀಲಂಕಾ 14.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 82 ರನ್ ಗಳಿಸಿತು. ವನಿಂದು ಹಸರಂಗ ಔಟಾಗದೆ 14 ರನ್ ಗಳಿಸಿದರು.
ಭಾರತದ ಪರ ರಾಹುಲ್ ಚಹಾರ್(3-15)ಮೂರು ವಿಕೆಟ್ ಗಳನ್ನು ಪಡೆದರು.
ಇದಕ್ಕೂಮೊದಲು ಟಾಸ್ ಜಯಿಸಿದ ನಾಯಕ ಶಿಖರ್ ಧವನ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಸ್ವತಃ ಧವನ್ ಸೇರಿದಂತೆ ಎಲ್ಲ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಗೆ ಪರೇಡ್ ನಡೆಸಿದ ಪರಿಣಾಮವಾಗಿ ಭಾರತವು ಭಾರೀ ಬ್ಯಾಟಿಂಗ್ ವೈಫಲ್ಯ ಕಂಡಿತು. ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 81 ರನ್ ಗಳಿಸಲಷ್ಟೇ ಶಕ್ತವಾಯಿತು.
ಭಾರತವು ಟಿ-20 ಕ್ರಿಕೆಟ್ ನಲ್ಲಿ ಮೂರನೇ ಕನಿಷ್ಠ ಸ್ಕೋರ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಧವನ್ ಮೊದಲ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು.
ಭಾರತದ ಪರ ಸ್ಪಿನ್ ಬೌಲರ್ ಕುಲದೀಪ್ ಯಾದವ್ (ಔಟಾಗದೆ 23)ಸರ್ವಾಧಿಕ ಸ್ಕೋರ್ ಗಳಿಸಿದರು. ಋತುರಾಜ್ ಗಾಯಕ್ವಾಡ್ (14), ಭುವನೇಶ್ವರ ಕುಮಾರ್ (16)ಎರಡಂಕೆಯ ಸ್ಕೋರ್ ಗಳಿಸಿದರು. ನಾಯಕ ಧವನ್, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಲಂಕಾದ ಪರವಾಗಿ ವನಿಂದು ಹಸರಂಗ(4-9) ಹಾಗೂ ನಾಯಕ ದಸುನ್ ಶನಕ(2-20)ಆರು ವಿಕೆಟ್ ಗಳನ್ನು ಹಂಚಿಕೊಂಡರು.