ಪೆಗಾಸಸ್ ಒಂದು ಸಮಸ್ಯೆ ಅಲ್ಲ,ಜನತೆಗೆ ಸಂಬಂಧಿತ ವಿಷಯಗಳ ಚರ್ಚೆಗೆ ಸರಕಾರ ಸಿದ್ಧ: ಕೇಂದ್ರ ಸಚಿವ ಜೋಶಿ
ಹೊಸದಿಲ್ಲಿ: ಪೆಗಾಸಸ್ ಗೂಢಚಾರಿಕೆ ವಿಷಯದ ಬಗ್ಗೆ ಪ್ರತಿಪಕ್ಷದ ಸದಸ್ಯರು ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದಕ್ಕೆ ಶುಕ್ರವಾರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪೆಗಾಸಸ್ ವಿವಾದವು 'ಸಮಸ್ಯೆಯಲ್ಲ' ಹಾಗೂ ಜನರಿಗೆ ಸಂಬಂಧಿತ ವಿಷಯಗಳ ಬಗ್ಗೆ ಚರ್ಚೆಗೆ ಸರಕಾರ ಸಿದ್ಧವಾಗಿದೆ ಎಂದು ಹೇಳಿದರು.
ಪ್ರತಿಪಕ್ಷದ ನಡವಳಿಕೆಯನ್ನು "ದುರದೃಷ್ಟಕರ" ಎಂದು ಕರೆದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರು ಪ್ರತಿಭಟನಾ ನಿರತ ಸದಸ್ಯರನ್ನು ಸದನ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಒತ್ತಾಯಿಸಿದರು.
ಐಟಿ ಸಚಿವರು ಈಗಾಗಲೇ ಉಭಯ ಸದನಗಳಲ್ಲಿ ಪೆಗಾಸಸ್ ವಿಷಯದ ಬಗ್ಗೆ ವಿವರವಾದ ಹೇಳಿಕೆ ನೀಡಿದ್ದಾರೆ ಎಂದು ಉಲ್ಲೇಖಿಸಿದ ಜೋಶಿ, "ಭಾರತದ ಜನತೆಗೆ ನೇರವಾಗಿ ಸಂಬಂಧಿಸಿರುವ ಹಲವು ಸಮಸ್ಯೆಗಳಿವೆ ... ಸರಕಾರ ಚರ್ಚೆಗೆ ಸಿದ್ಧವಾಗಿದೆ" ಎಂದು ಹೇಳಿದರು.
"ನಾವು ಚರ್ಚೆಗಳಿಲ್ಲದೆ ಮಸೂದೆಗಳನ್ನು ಅಂಗೀಕರಿಸಲು ಬಯಸುವುದಿಲ್ಲ" ಎಂದು ಜೋಶಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆದರೆ, ಸಾರ್ವಜನಿಕ ವ್ಯಕ್ತಿಗಳ ಮೇಲೆ ಕಣ್ಣಿಡಲು ಪೆಗಾಸಸ್ ಸ್ಪೈವೇರ್ ಬಳಸಲಾಗುತ್ತಿದೆ ಎಂಬ ಆರೋಪವನ್ನು ನರೇಂದ್ರ ಮೋದಿ ನೇತೃತ್ವದ ಸರಕಾರ ನಿರಾಕರಿಸಿದೆ. ಈ ವರದಿ ಸಂವೇದನಾಶೀಲ ಹಾಗೂ ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸುಸ್ಥಾಪಿತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಯತ್ನಎಂದೂ ಕರೆದಿದೆ.