ಕಾಲಿಗೆ ಗಾಯ; ರನ್ನರ್ ಅಪ್ಗೆ ತೃಪ್ತಿಪಟ್ಟ ಲಕ್ಷ್ಯ ಸೇನ್
ಜರ್ಮನ್ ಓಪನ್ ಬ್ಯಾಡ್ಮಿಂಟನ್
ಹೊಸದಿಲ್ಲಿ: ಒಲಿಂಪಿಕ್ ಚಾಂಪಿಯನ್ಗೆ ಸೋಲುಣಿಸಿ ಫೈನಲ್ ಪ್ರವೇಶಿಸುವ ಮೂಲಕ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದ ಭಾರತದ ಲಕ್ಷ್ಯ ಸೇನ್ ಜರ್ಮನ್ ಓಪನ್ ಬ್ಯಾಡ್ಮಿಂಟನ್ ಫೈನಲ್ನಲ್ಲಿ ಥಾಯ್ಲೆಂಡ್ನ ಕುನ್ಲವೂತ್ ವಿಟಿಡ್ಸಾರ್ನ್ ವಿರುದ್ಧ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.
ಕಾಲಿನ ಗಾಯದಿಂದಾಗಿ ತಮ್ಮ ಸಂಪೂರ್ಣ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯವಾಗದ ಲಕ್ಷ್ಯ ಸೇನ್, 18-21, 15-21 ಗೇಮ್ಗಳಿಂದ ಸೋಲು ಅನುಭವಿಸಿದರು. ಸದ್ಯದಲ್ಲೇ ಆಲ್ ಇಂಗ್ಲೆಂಡ್ ಓಪನ್ ಟೂರ್ನಿ ಆರಂಭವಾಗುವ ಹಿನ್ನೆಲೆಯಲ್ಲಿ ಭಾರತದ ಯುವ ಆಟಗಾರನಿಗೆ ಕಾಲಿನ ಗಾಯ ಗಂಭೀರ ಸಮಸ್ಯೆಯಾಗಿ ಎದುರಾಗಿದೆ. ವಿಶ್ವದ ನಂಬರ್ ವನ್ ಆಟಗಾರ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಸೆಮಿಫೈನಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸೇನ್ ಅವರ ಪ್ರಶಸ್ತಿ ಕನಸಿಗೆ ಕಾಲಿನ ಗಾಯ ಅಡ್ಡಿಯಾಯಿತು.
ಎರಡೂ ಗೇಮ್ಗಳಲ್ಲೂ ಉತ್ತಮ ಹೋರಾಟ ಪ್ರದರ್ಶಿಸಿದರೂ, ಸೆಟ್ ಗೆಲ್ಲುವುದು ಅಸಾಧ್ಯವಾಯಿತು. ಎರಡೂ ಗೇಮ್ಗಳಲ್ಲಿ ಪ್ರತಿಹೋರಾಟ ತೋರಿದ ಸೇನ್ ಎರಡನೇ ಗೇಮ್ನಲ್ಲಿ ಹಿನ್ನಡೆಯನ್ನು 13-16ಕ್ಕೆ ತಂದಾಗ ತೀವ್ರ ಕಾಲು ನೋವಿನಿಂದಾಗಿ ವಿಟಡ್ ಸಾರ್ನ್ಗೆ ಶರಣಾಗಬೇಕಾಯಿತು. ಏತನ್ಮಧ್ಯೆ ಮೂರು ಬಾರಿಯ ವಿಶ್ವ ಜೂನಿಯರ್ ಚಾಂಪಿಯನ್ ವಿಟಿಡ್ಸಾರ್ನ್, ತಮ್ಮ ಮೊದಲ ಬಿಡಬ್ಲ್ಯುಎಫ್ ಪ್ರಶಸ್ತಿ ಗೆಲ್ಲುವುದು ಸಾಧ್ಯವಾಯಿತು.