ಟಿ-20 ವಿಶ್ವಕಪ್ ಸೆಮಿಫೈನಲ್: ಇಂದು ಭಾರತ - ಇಂಗ್ಲೆಂಡ್ ಪಂದ್ಯ
ಚೆನ್ನೈ: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾಗಿ ಐದು ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ರೋಹಿತ್ ಶರ್ಮಾ ಇದೀಗ ಭಾರತಕ್ಕೆ ಟಿ-20 ವಿಶ್ವಕಪ್ ಗೆದ್ದುಕೊಡಲು ಎರಡು ಹೆಜ್ಜೆಯನ್ನಷ್ಟೇ ಕ್ರಮಿಸಬೇಕಿದ್ದು, ಇಂದು ನಡೆಯುವ ಸೆಮಿಫೈನಲ್ ಪಂದ್ಯ ರೋಹಿತ್ ನೇತೃತ್ವದ ಟೀಂ ಇಂಡಿಯಾಗೆ ಅಗ್ನಿ ಪರೀಕ್ಷೆಯಾಗಲಿದೆ ಎಂದು newindianexpress.com ವರದಿ ಮಾಡಿದೆ.
ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಭಾರತ ತಂಡದ ಇಬ್ಬರು ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ತೋರುತ್ತಿದ್ದರೆ, ಅರ್ಷದೀಪ್ ಸಿಂಗ್ ವೇಗದ ದಾಳಿಯ ಮುಂಚೂಣಿಯಲ್ಲಿದ್ದಾರೆ. ಆದಾಗ್ಯೂ ಫೈನಲ್ನಲ್ಲಿ ಪಾಕಿಸ್ತಾನವನ್ನು ಎದುರಿಸುವ ಅರ್ಹತೆ ಪಡೆಯಲು, ಗುರುವಾರ ಇಂಗ್ಲೆಂಡ್ ವಿರುದ್ಧ ಜಯ ಗಳಿಸಬೇಕಿದೆ. ನ್ಯೂಝಿಲೆಂಡ್ ವಿರುದ್ಧ 7 ವಿಕೆಟ್ಗಳ ಅಧಿಕಾರಯುತ ಜಯ ಸಾಧಿಸಿದ ಪಾಕಿಸ್ತಾನ ಈಗಾಗಲೇ ಫೈನಲ್ ಪ್ರವೇಶಿಸಿದೆ.
ಆದರೆ ಫೀಲ್ಡಿಂಗ್ನಲ್ಲಿ ಭಾರತ ಸಮಸ್ಯೆ ಎದುರಿಸುತ್ತಿದ್ದು, ಆರಂಭಿಕ ಬಾಟ್ಸ್ಮನ್ಗಳು ಇನ್ನೂ ರನ್ ಸಿಡಿಸಿಲ್ಲ. ಪವರ್ ಪ್ಲೇನಲ್ಲಿ ಭಾರತ ನಿರೀಕ್ಷಿತ ರನ್ ಗಳಿಸುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಭಾರತಕ್ಕೆ ಅಡಿಲೇಡ್ನಲ್ಲಿ ಗುರುವಾರ ನೈಜ ಅಗ್ನಿಪರೀಕ್ಷೆ ಎದುರಾಗಿದೆ. ಈ ಅಂಗಳದಲ್ಲಿ ಆಟ ಮುಂದುವರಿದಂತೆಲ್ಲ ರನ್ ಗಳಿಕೆ ಕಷ್ಟಕರ ಎನ್ನುವುದು ಈಗಾಗಲೇ ನೆದರ್ಲೆಂಡ್ಸ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸಾಬೀತಾಗಿದೆ. ಸ್ಯಾಮ್ ಕುರ್ರನ್ ಹಾಗೂ ಅದಿಲ್ ರಶೀದ್ ಅವರ ಉತ್ತಮ ಬೌಲಿಂಗ್ ಬಲ ಇಂಗ್ಲೆಂಡ್ನ ಪ್ರಮುಖ ಅಸ್ತ್ರ. ಭಾರತ ಒಂಬತ್ತು ವರ್ಷಗಳಲ್ಲಿ ನಾಕೌಟ್ ಹಂತದಲ್ಲಿ ವಿಫಲವಾಗಿದ್ದು, ಎಂಟು ಪಂದ್ಯಗಳಲ್ಲಿ ಐದನ್ನು ಸೋತಿದೆ. ಈ ಹಣೆಪಟ್ಟಿಯನ್ನು ಕಳಚಲು ರೋಹಿತ್ ಶರ್ಮಾ ಈಗಾಗಲೇ ಕಾರ್ಯತಂತ್ರ ರೂಪಿಸಿದ್ದಾರೆ ಎಂದು newindianexpress.com ವರದಿ ಮಾಡಿದೆ.