ಭಾರತ ಟಿ-20 ತಂಡದಿಂದ ಹಿರಿಯರಿಗೆ ಕೊಕ್; ಆಮೂಲಾಗ್ರ ಬದಲಾವಣೆ?
ಅಡಿಲೇಡ್: ಟಿ-20 ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್ಗಳ ಅಂತರದ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಭಾರತೀಯ ತಂಡದ ಪುನರ್ರಚನೆ ಬಗೆಗಿನ ಚರ್ಚೆಗಳು ಗರಿಗೆದರಿವೆ. ಮುಂದಿನ 24 ತಿಂಗಳಲ್ಲಿ ಭಾರತ ಟಿ-20 ತಂಡ ದೊಡ್ಡ ಬದಲಾವಣೆಗಳನ್ನು ಕಾಣಲಿದ್ದು, ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ಅವರಂಥ ಆಟಗಾರರು ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ ಎಂದು ವರದಿಯಾಗಿದೆ.
ಅಶ್ವಿನ್ ಹಾಗೂ ದಿನೇಶ್ ಕಾರ್ತಿಕ್ ಚುಟುಕು ಕ್ರಿಕೆಟ್ನಲ್ಲಿ ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯ ಆಡಿದ್ದರೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಮ್ಮ ಟಿ-20 ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಅವಕಾಶವನ್ನು ಅವರಿಗೇ ಬಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲು ರೋಹಿತ್ ಶರ್ಮಾ ಅವರನ್ನು ಧೃತಿಗೆಡಿಸಿದ್ದು, ಪಂದ್ಯದ ಬಳಿಕ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮದ ಎದುರು ಬಂದಿದ್ದರು ಎನ್ನುವುದು ಉಲ್ಲೇಖಾರ್ಹ.
ಮುಂದಿನ ಟಿ-20 ಕಪ್ಗೆ ಇನ್ನೂ ಎರಡು ವರ್ಷ ಕಾಯಬೇಕಿದ್ದು, ಈ ಅವಧಿಯಲ್ಲಿ ಹೊಚ್ಚ ಹೊಸ ಭಾರತ ತಂಡ ಸಜ್ಜಾಗಲಿದ್ದು, ಹಾರ್ದಿಕ್ ಪಾಂಡ್ಯ ಧೀರ್ಘಾವಧಿ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಹೇಳಿವೆ.
"ಯಾರನ್ನೂ ನಿವೃತ್ತರಾಗುವಂತೆ ಬಿಸಿಸಿಐ ಸೂಚಿಸುತ್ತಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಅದರೆ 2023ರಲ್ಲಿ ಭಾರತ ತಂಡದ ಟಿ-20 ವೇಳಾಪಟ್ಟಿಯಲ್ಲಿ ಸಾಕಷ್ಟು ಪಂದ್ಯಗಳು ಇದ್ದು, ಹೆಚ್ಚಿನ ಹಿರಿಯ ಆಟಗಾರರು ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ಮೇಲೆ ಕೇಂದ್ರೀಕರಿಸಲಿದ್ದಾರೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ನಿಮಗೆ ಇಚ್ಛೆ ಇಲ್ಲದಿದ್ದರೆ ನೀವು ನಿವೃತ್ತಿ ಘೋಷಿಸುವ ಅಗತ್ಯವಿಲ್ಲ. ಆದರೆ ಮುಂದಿನ ವರ್ಷದ ಟಿ20 ಪಂದ್ಯಗಳಲ್ಲಿ ಬಹುತೇಕ ಹಿರಿಯ ಆಟಗಾರರನ್ನು ನೀವು ಕಾಣಲಾರಿರಿ" ಎಂದು ಮೂಲಗಳು ಸ್ಪಷ್ಟಪಡಿಸಿವೆ.