ಸೂರ್ಯಕುಮಾರ್ ಯಾದವ್ ರನ್ನು ಬಿಗ್ಬ್ಯಾಶ್ ಟೂರ್ನಿಗೆ ಕರೆಸುವಷ್ಟು ಹಣ ನಮ್ಮಲ್ಲಿಲ್ಲ: ಮ್ಯಾಕ್ಸ್ವೆಲ್
ಹೊಸದಿಲ್ಲಿ, ನ.23: ಭಾರತ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ, ಟ್ವೆಂಟಿ-20 ಕ್ರಿಕೆಟ್ನ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ಆಸ್ಟ್ರೇಲಿಯದ ಐಪಿಎಲ್ ಮಾದರಿಯ ಪಂದ್ಯಾವಳಿ ಬಿಗ್ಬ್ಯಾಶ್ಗೆ ಕರೆಸುವಷ್ಟು ಹಣ ನಮ್ಮಲ್ಲಿಲ್ಲ ಎಂದು ಆಸ್ಟ್ರೇಲಿಯದ ತಂಡದ ಬ್ಯಾಟರ್ ಗ್ಲೆನ್ ಮ್ಯಾಕ್ಸ್ವೆಲ್ ಹೇಳಿದ್ದಾರೆ. ಕ್ರಿಕೆಟ್ ಸುದ್ದಿಸಂಸ್ಥೆಯೊಂದಕ್ಕೆ ಮ್ಯಾಕ್ಸ್ವೆಲ್ ನೀಡಿದ ಸಂದರ್ಶನವನ್ನು ಉಲ್ಲೇಖಿಸಿ ಎನ್ಡಿಟಿವಿ ಈ ವರದಿ ಮಾಡಿದೆ.
ಭವಿಷ್ಯದಲ್ಲಿ ಸೂರ್ಯಕುಮಾರ್ ಅವರು ಬಿಗ್ಬ್ಯಾಶ್ ಟೂರ್ನಿಯ ಒಪ್ಪಂದಕ್ಕೆ ಸಹಿ ಹಾಕಿದರೆ? ಎಂಬ ತಮಾಷೆಯ ಪ್ರಶ್ನೆಗೆ ಉತ್ತರಿಸಿದ ಮ್ಯಾಕ್ಸ್ವೆಲ್, ನಮ್ಮ ಬಳಿ ಸಾಕಷ್ಟು ಹಣವಿಲ್ಲ. ಅವರು ಬಿಗ್ಬ್ಯಾಶ್ ಟೂರ್ನಿಗೆ ಬರಲು ಸಾಧ್ಯವೇ ಇಲ್ಲ. ಅವರನ್ನು ಸೇರಿಸುವುದಾದರೆ ನಾವು ಪ್ರತಿ ಆಟಗಾರರ ಒಪ್ಪಂದವನ್ನು ರದ್ದು ಪಡಿಸಬೇಕಾಗುತ್ತದೆ ಎಂದು ಮ್ಯಾಕ್ಸ್ವೆಲ್ ಹೇಳಿದ್ದಾರೆ.
ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಟ್ವೆಂಟಿ-20 ಸರಣಿಯ 2ನೆ ಪಂದ್ಯದಲ್ಲಿ ಸೂರ್ಯಕುಮಾರ್ ಕೇವಲ 51 ಎಸೆತಗಳಲ್ಲಿ 111 ರನ್ ಗಳಿಸಿದ್ದರು.