ವಿರಾಟ್ ಕೊಹ್ಲಿ ಅವರಿಂದ ‘ವಿಶೇಷ ಸ್ಮರಣಿಕೆ’ ಸ್ವೀಕರಿಸಿದ ಮೆಹಿದಿ ಹಸನ್
ಢಾಕಾ, ಡಿ.25: ಭಾರತ ಹಾಗೂ ಬಾಂಗ್ಲಾದೇಶ ನಡುವೆ ರವಿವಾರ ಟೆಸ್ಟ್ ಸರಣಿ ಮುಕ್ತಾಯಗೊಂಡ ಬಳಿಕ ಬಾಂಗ್ಲಾದೇಶದ ಆಟಗಾರ ಮೆಹಿದಿ ಹಸನ್ ಮಿರಾಝ್ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಂದ ‘ವಿಶೇಷ ಸ್ಮರಣಿಕೆ’ಯನ್ನು ಸ್ವೀಕರಿಸಿದರು.
ಭಾರತವು ಬಾಂಗ್ಲಾದೇಶ ವಿರುದ್ಧದ ಎರಡನೇ ಪಂದ್ಯವನ್ನು 3 ವಿಕೆಟ್ಗಳ ಅಂತರದಿಂದ ಗೆದ್ದುಕೊಂಡು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ಮೆಹಿದಿ ಹಸನ್ ಪಂದ್ಯ ಮುಗಿದ ನಂತರ ತಾನು ಕ್ರಿಸ್ಮಸ್ ಪ್ರಯುಕ್ತ ಕೊಹ್ಲಿಯಿಂದ ಸ್ವೀಕರಿಸಿದ್ದ ಜೆರ್ಸಿಯ ಚಿತ್ರವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ.
ಓರ್ವ ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಅವರಿಂದ ‘ವಿಶೇಷ ಸ್ಮರಣಿಕೆ’ ಲಭಿಸಿದೆ ಎಂದು ಮೆಹಿದಿ ಹೇಳಿದ್ದಾರೆ. ಮೆಹಿದಿ ತನ್ನ ಸ್ಪಿನ್ ಮೋಡಿಯಿಂದ ಭಾರತದ ಪಾಳಯದಲ್ಲಿ ಸೋಲಿನ ಭೀತಿ ಹುಟ್ಟಿಸಿದ್ದರು. ಅಶ್ವಿನ್ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕದ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. 3ನೇ ದಿನದಾಟವಾದ ಶನಿವಾರ ಮೂರು ವಿಕೆಟ್ ಗಳನ್ನು ಉರುಳಿಸಿದ್ದ ಮೆಹಿದಿ ತನ್ನ ತಂಡ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸವನ್ನು ಮೂಡಿಸಿದ್ದರು.