ಭಾರತ ಟೆಸ್ಟ್ ತಂಡದಲ್ಲಿ ಉಪನಾಯಕ ಸ್ಥಾನ ಕಳೆದುಕೊಂಡ ಕೆ.ಎಲ್. ರಾಹುಲ್
ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧದ ಮೂರನೇ ಹಾಗೂ 4 ನೇ ಟೆಸ್ಟ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ ಕೆ.ಎಲ್. ರಾಹುಲ್ ಅವರನ್ನು ಉಪ ನಾಯಕನ ಸ್ಥಾನದಿಂದ ಕೆಳಗಿಳಿಸಿರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಕಳಪೆ ಫಾರ್ಮ್ನಲ್ಲಿರುವ ಕರ್ನಾಟಕದ ಬ್ಯಾಟರ್ ನ ಹೆಸರಿನ ಮುಂದೆ 'ಉಪನಾಯಕ' ಟ್ಯಾಗ್ ಇರಲಿಲ್ಲ. ಈ ನಿರ್ಧಾರವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದೆ, ಆರಂಭಿಕ ಬ್ಯಾಟರ್ ಉಪ ನಾಯಕನ ಸ್ಥಾನ ಕಳೆದುಕೊಂಡಿದ್ದಾರೆಯೇ?ಎಂದು ಆಶ್ಚರ್ಯ ಪಡುತ್ತಿದ್ದಾರೆ.
ರಾಹುಲ್ ಕಳೆದ ಏಳು ಇನ್ನಿಂಗ್ಸ್ಗಳಲ್ಲಿ 22, 23, 10, 2, 20, 17, ಹಾಗೂ 1 ಸ್ಕೋರ್ ಗಳಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧ ಮುಕ್ತಾಯಗೊಂಡ ಎರಡು ಟೆಸ್ಟ್ಗಳಲ್ಲಿ ತಕ್ಕಮಟ್ಟಿಗೆ ಪ್ರದರ್ಶನ ನೀಡಿದರು. ಶುಬ್ಮನ್ ಗಿಲ್ ಅವರಂತಹ ಇನ್-ಫಾರ್ಮ್ ಬ್ಯಾಟರ್ ಅವಕಾಶಕ್ಕಾಗಿ ಕಾಯುತ್ತಿದ್ದು,ಭಾರತೀಯ ತಂಡದ ನಿರ್ವಹಣೆಯ ಮೇಲೆ ಒತ್ತಡ ಹೆಚ್ಚುತ್ತಿದೆ.
ರಾಹುಲ್ ಅವರನ್ನು ಇನ್ನೂ ತಂಡದಿಂದ ಕೈಬಿಡದಿದ್ದರೂ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಲು ಮಂಡಳಿ ನಿರ್ಧರಿಸಿದಂತೆ ಕಾಣುತ್ತಿದೆ.
ವರದಿಯ ಪ್ರಕಾರ, ನಾಯಕ ರೋಹಿತ್ ಶರ್ಮಾ ಅವರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ತನ್ನ ಉಪನಾಯಕನನ್ನು ನೇಮಿಸುವ ಅಧಿಕಾರವನ್ನು ಬಿಸಿಸಿಐ ನೀಡಿದೆ.
"ಯಾವುದೇ ಉಪನಾಯಕನನ್ನು ಹೆಸರಿಸದಿರಲು ನಿರ್ಧರಿಸಲಾಯಿತು. ಬದಲಿಗೆ, ಈ ಅಧಿಕಾರವನ್ನು ರೋಹಿತ್ ಶರ್ಮಾಗೆ ನೀಡಲಾಯಿತು. ಅವರು ಮೈದಾನವನ್ನು ತೊರೆಯಬೇಕಾದರೆ ಯಾರು ತಂಡವನ್ನು ಮುನ್ನಡೆಸುತ್ತಾರೆ ಎಂಬುದು ರೋಹಿತ್ ಶರ್ಮಾ ಅವರೇ ನಿರ್ಧರಿಸುತ್ತಾರೆ" ಎಂದು ಇಂಡಿಯನ್ ‘ಎಕ್ಸ್ಪ್ರೆಸ್’ ಮೂಲಗಳನ್ನು ಉಲ್ಲೇಖಿಸಿದೆ.