ನೋ-ಬಾಲ್ಗಳನ್ನು ಎಸೆಯಬೇಡಿ: ಚೆನ್ನೈ ಬೌಲರ್ ಗಳಿಗೆ ಎಂ.ಎಸ್. ಧೋನಿ ಎಚ್ಚರಿಕೆ
ಚೆನ್ನೈ: ಈಗ ನಡೆಯುತ್ತಿರುವ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ ಮೊದಲೆರಡು ಪಂದ್ಯಗಳಲ್ಲಿ ಎಕ್ಸ್ ಟ್ರಾ ರನ್ ಹೆಚ್ಚು ನೀಡಿತ್ತು. ಸೋಮವಾರ ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಲಕ್ನೊ ವಿರುದ್ಧ 12 ರನ್ ನಿಂದ ಗೆಲುವು ದಾಖಲಿಸಿದ್ದರೂ ಕೂಡ ಬೌಲರ್ಗಳು 18 ಎಕ್ಸ್ಟ್ರಾ ರನ್ ಗಳನ್ನು (ಲೆಗ್-ಬೈಸ್ - 2, ವೈಡ್ಸ್ – 13, ನೋ ಬಾಲ್ಗಳು - 3) ಬಿಟ್ಟುಕೊಟ್ಟಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಸಿಎಸ್ ಕೆ ಆಡಿದ್ದ ಮೊದಲ ಪಂದ್ಯದಲ್ಲೂ ಬೌಲರ್ಗಳು 2 ನೋ-ಬಾಲ್ ಸಹಿತ 12 ಎಕ್ಸ್ಟ್ರಾ ರನ್ ಗಳನ್ನು ಬಿಟ್ಟುಕೊಟ್ಟಿದ್ದರು.
ಸಿಎಸ್ ಕೆ ನಾಯಕ ಎಂ.ಎಸ್. ಧೋನಿ ನೋ-ಬಾಲ್ ಎಸೆಯುತ್ತಿರುವ ತಮ್ಮ ಬೌಲರ್ ಗಳಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
"ವೇಗದ ಬೌಲಿಂಗ್ ಅನ್ನು ನಾವು ಸ್ವಲ್ಪ ಸುಧಾರಿಸಬೇಕಾಗಿದೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ಬೌಲಿಂಗ್ ಮಾಡಬೇಕಾಗಿದೆ. ಎದುರಾಳಿ ಬೌಲರ್ಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುವುದು ಮುಖ್ಯವಾದುದು. ಇನ್ನೊಂದು ವಿಷಯವೆಂದರೆ ಯಾರೂ ನೋ-ಬಾಲ್ ಅಥವಾ ಹೆಚ್ಚುವರಿ ವೈಡ್ ಗಳನ್ನು ಹಾಕಬಾರದು. ಹಾಗೆ ಮಾಡಿದರೆ ಹೊಸ ನಾಯಕನ ಅಡಿಯಲ್ಲಿ ಆಡಬೇಕಾಗುತ್ತದೆ. ಇದು ನನ್ನ ಎರಡನೇ ಎಚ್ಚರಿಕೆ. ನಂತರ ನಾನು ಹೊರಗುಳಿಯುತ್ತೇನೆ" ಎಂದು ಧೋನಿ ಹೇಳಿದ್ದಾರೆ.
ಎಂಎ ಚಿದಂಬರಂ ಸ್ಟೇಡಿಯಂನ ಪಿಚ್ ನೋಡಿ ಧೋನಿ ಕೂಡ ಅಚ್ಚರಿಗೊಂಡರು. "ಇದೊಂದು ಸೊಗಸಾದ ಆಟ, ಗರಿಷ್ಠ ರನ್ ನ ಗೇಮ್ ಆಗಿತ್ತು ಇದೊಂದು ತವರಿನಲ್ಲಿ ನಡೆದ ಪರಿಪೂರ್ಣ ಮೊದಲ ಪಂದ್ಯ ಎಂದು ನಾನು ಭಾವಿಸುತ್ತೇನೆ. ನಾವು ಇಲ್ಲಿ 5 ಅಥವಾ 6 ವರ್ಷಗಳ ನಂತರ ಆಡಿದ್ದ ಕಾರಣ ಮೊದಲ ಪಂದ್ಯಕ್ಕೆ ಸ್ಟೇಡಿಯಮ್ ಹೌಸ್ ಫುಲ್ ಆಗಿತ್ತು’’ ಧೋನಿ ಹೇಳಿದರು.