ಅಮಿತ್ ಶಾ ನನ್ನನ್ನು ಕೊಲ್ಲಿಸಬಹುದು: ಮಾಜಿ ಶಾಸಕ ಛೋಟುಭಾಯಿ ವಾಸವ ಆರೋಪ
ಛೋಟುಭಾಯಿ ವಾಸವ
ಅಹ್ಮದಾಬಾದ್, ನ.30: "ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನನ್ನನ್ನು ಕೊಲ್ಲಿಸಬಹುದು'' ಎಂದು ಗುಜರಾತ್ ರಾಜ್ಯದ ಮಾಜಿ ಜೆಡಿ(ಯು) ಶಾಸಕ ಛೋಟುಭಾಯಿ ವಾಸವ ಆರೋಪಿಸಿದ್ದಾರೆ ಎಂದು intoday.in ವರದಿ ಮಾಡಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಪಕ್ಷದಿಂದ ಹೊರಬಂದಿರುವ ವಾಸವ ಅವರು ಆದಿವಾಸಿ ನಾಯಕರಾಗಿದ್ದಾರಲ್ಲದೆ ಭಾರತೀಯ ಟ್ರೈಬಲ್ ಪಾರ್ಟಿಯನ್ನೂ ಸ್ಥಾಪಿಸಿದ್ದು, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಗುಜರಾತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಫೇಸ್ ಬುಕ್ ನಲ್ಲಿ ಈ ಬಗ್ಗೆ ವಾಸವ ವಿಡಿಯೋ ಪೋಸ್ಟ್ ಮಾಡಿದ್ದು, "ರಾಜ್ಯದ ತಮ್ಮ ಕೆಲವು ಆಯ್ದ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಶಾ ನನ್ನನ್ನು ಹತ್ಯೆ ಮಾಡಿಸಬಹುದು. ವಿಜಯ್ ರೂಪಾನಿ ನೇತೃತ್ವದ ಸರಕಾರ ನನ್ನನ್ನು ಕೊಲ್ಲಬಯಸಿದೆ. ರಾಜ್ಯದಲ್ಲಿ ಹಲವಾರು ಪ್ರತಿಭಟನಾಕಾರರನ್ನು ಗುಜರಾತ್ ಸರಕಾರ ಹಿಂಸಿಸಿ ಸಾಯಿಸಿದೆ,'' ಎಂದು ಅವರು ಆರೋಪಿಸಿದ್ದಾರೆ ಎಂದು intoday.in ವರದಿ ಮಾಡಿದೆ.
``ಶಾ ನನ್ನ ಮನೆಗೆ ದಾಳಿಯಾಗುವಂತೆ ನೋಡಿಕೊಂಡಿದ್ದರು. ಅವರು ನನ್ನನ್ನು ಕೊಲ್ಲಿಸಲೂಬಹುದು ಎಂಬ ಭಯ ನನ್ನನ್ನು ಕಾಡುತ್ತಿದೆ. ನಾನು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಹ್ಮದ್ ಶಾ ಅವರಿಗೆ ಮತ ಹಾಕಿದ್ದರಿಂದ ಅದಕ್ಕೆ ಪ್ರತೀಕಾರ ತೀರಿಸಲು ಶಾ ಬಯಸುತ್ತಿದ್ದಾರೆ" ಎಂದು ವಾಸವ ಆರೋಪಿಸಿರುವುದಾಗಿ ವರದಿಯಾಗಿದೆ.
ವಾಸವ ಅವರು ಇದೀಗ ಚುನಾವಣಾ ಆಯೋಗದ ಸಹಾಯ ಕೋರಿದ್ದಾರೆ.