ದೇಶದ ರೈತರು, ಕಾರ್ಮಿಕರು, ದಲಿತರು ಅಪಾಯದಲ್ಲಿ: ಹಾರ್ದಿಕ್ ಪಟೇಲ್
ಭೋಪಾಲ್, ಎ.9: ಮಧ್ಯಪ್ರದೇಶದ ಬುಂಡೇಲ್ಖಂಡ ಪ್ರದೇಶದಲ್ಲಿ ಬಿರುಕು ಬಿಟ್ಟ ಭೂಮಿ, ಒಣ ನದಿಗಳು, ಸಂಕಷ್ಟದಲ್ಲಿರುವ ಪ್ರಾಣಿಗಳು ಹಾಗೂ ಪ್ರಗತಿ ಕೊರತೆಗೆ ಯಾರು ಕಾರಣ ಎಂದು ಗುಜರಾತ್ ಪಾಟೀದಾರ ಮುಖಂಡ ಹಾರ್ದಿಕ್ ಪಟೇಲ್ ರೈತರ ರ್ಯಾಲಿಯಲ್ಲಿ ಪ್ರಶ್ನಿಸಿದರು.
"ನಾನು ಬುಂಡೇಲ್ಖಂಡದಲ್ಲಿ ರಾಜಕೀಯ ಮಾಡುವ ಸಲುವಾಗಿ ಬಂದಿಲ್ಲ. ಮಧ್ಯಪ್ರದೇಶ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಗಳಿಗೆ ಮತ ನೀಡಿ ಎಂದು ಕೇಳುವ ಸಲುವಾಗಿ ಬಂದಿದ್ದೇನೆ" ಎಂದು ಸ್ಪಷ್ಟಪಡಿಸಿದರು.
"ನಿಮ್ಮಲ್ಲಿ ಜಾಗೃತಿ ಮೂಡಿಸಲು ಬಂದಿದ್ದೇನೆ. ನಮ್ಮ ಸಮಯ ಕಳೆಯುತ್ತಿದೆ. ನಮ್ಮ ರೈತರು, ಕಾರ್ಮಿಕರು, ದಲಿತರು, ಹಿಂದುಳಿದ ಸಮುದಾಯಗಳು ಅಪಾಯದಲ್ಲಿವೆ. ಇಡೀ ಭಾರತಕ್ಕೆ ಅಪಾಯ ಎದುರಾಗಿದೆ. ನಾವು ಎಚ್ಚೆತ್ತುಕೊಳ್ಳದಿದ್ದರೆ, ನಮ್ಮನ್ನು ಮುಗಿಸಿಬಿಡುತ್ತಾರೆ. ಈ ಯುಗವನ್ನು ನಾವು ಬದಲಿಸಬೇಕು" ಎಂದು ಸಾಗರ್ ಜಿಲ್ಲೆಯ ಗರ್ಹಕೋಟಾದಲ್ಲಿ ನಡೆದ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹೇಳಿದರು.
"ಸಣ್ಣ ಲಾಭಗಳಿಗಾಗಿ ನೀವು ಮತ ಹಾಕಿದರೆ, ಅವರು ಆಡಳಿತ ಮುಂದುವವರಿಸುತ್ತಾರೆ. ನಾವು ಇಂಥದ್ದೇ ಪ್ರತಿಭಟನೆಗಳನ್ನು ನಡೆಸುತ್ತಲೇ ಇರಬೇಕಾಗುತ್ತದೆ" ಎಂದು ಎಚ್ಚರಿಸಿದರು.