ವಿವಾಹ ಮಂಟಪದಲ್ಲೇ ಆಪ್ತಸ್ನೇಹಿತನ ಗುಂಡಿಗೆ ಬಲಿಯಾದ ವರ!
ವಿಡಿಯೋ ವೈರಲ್
ಶಹಜಹಾನ್ಪುರ, ಮೇ 1: ವಿವಾಹ ಮಂಟಪದಲ್ಲೇ ವರನೊಬ್ಬ ತನ್ನ ಆಪ್ತಸ್ನೇಹಿತನ ಗುಂಡಿಗೆ ಬಲಿಯಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಲಖೀಮ್ಪುರ ಖೇರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಿರುವ ಪೊಲೀಸರು, ಗುಂಡು ಹಾರಿಸಿರುವುದು ಉದ್ದೇಶಪೂರ್ವಕವೇ ಎಂಬುದನ್ನು ದೃಢಪಡಿಸಿಕೊಳ್ಳಲು ವಿಡಿಯೊ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ.
ವಿಡಿಯೊ ತುಣುಕಿನಲ್ಲಿ ಕಂಡುಬರುವಂತೆ ಆರೋಪಿ ರಾಮಚಂದ್ರ ಪಿಸ್ತೂಲು ಹೊಂದಿದ್ದ. ವರ ಸುನೀಲ್ ವರ್ಮಾ ಪಕ್ಕ ನಿಂತುಕೊಂಡಿದ್ದ. ರಾಮಚಂದ್ರನ ಬಳಿಯಿದ್ದ ಪಿಸ್ತೂಲಿನಿಂದ ಸಿಡಿದ ಗುಂಡು ವರನ ಎದೆಗೆ ಸಿಡಿದಿದೆ. ಈ ದಿಢೀರ್ ನೋವು ಮತ್ತು ಆಘಾತದಿಂದ ವರ ಎದೆ ಒತ್ತಿ ಹಿಡಿದುಕೊಂಡಿದ್ದು, ಗುಂಡು ತಗುಲಿರುವುದು ಆತನ ಗಮನಕ್ಕೆ ಬಂದಿರಲಿಲ್ಲ. ಕೆಲ ಕ್ಷಣ ತಬ್ಬಿಬ್ಬಾಗಿ ನೋಡುತ್ತಿದ್ದ ಆತನಿಗೆ ಆ ಬಳಿಕ ಏನಾಗಿದೆ ಎನ್ನುವುದು ಗಮನಕ್ಕೆ ಬಂದಿದೆ. ಸಂಗೀತ ಸಂಜೆ ನಡೆಯುತ್ತಿದ್ದಂತೇ ನೂರಾರು ಮಂದಿ ಅತಿಥಿಗಳ ಎದುರಲ್ಲೇ ಆತ ಕುಸಿದು ಬಿದ್ದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಚಂದ್ರನಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.
ಸಭಾಗೃಹದಲ್ಲಿ ಸಂಗೀತ ಸಂಜೆ ನಡೆಯುತ್ತಿದ್ದುದರಿಂದ ಏನಾಯಿತು ಎನ್ನುವುದು ತಕ್ಷಣಕ್ಕೆ ಯಾರಿಗೂ ತಿಳಿಯಲಿಲ್ಲ. ವರ್ಮಾಗೆ ಗುಂಡೇಟು ತಗುಲಿದ್ದೂ ಗೊತ್ತಾಗಲಿಲ್ಲ. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆ ವೇಳೆಗೆ ಅಸು ನೀಗಿದ್ದ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.