ಗರ್ಭಿಣಿಯ ಪ್ರಜ್ಞೆತಪ್ಪಿಸಿ ಸಾಮೂಹಿಕ ಅತ್ಯಾಚಾರ
ಗುರ್ಗಾಂವ್, ಮೇ 27: ಗರ್ಭಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆ ಪ್ರಜ್ಞೆ ತಪ್ಪಿದ ಬಳಿಕ ಎಸೆದು ಹೋದ ಅಮಾನುಷ ಘಟನೆ ಮನೇಸರ್ ಗ್ರಾಮದಲ್ಲಿ ನಡೆದಿದೆ.
ಗರ್ಭಿಣಿಯು ಮೇ 21ರಂದು ಇಎಸ್ಐಸಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿ ಮನೆಗೆ ಹಿಂದಿರುಗಲು ಆಟೊರಿಕ್ಷಾದಲ್ಲಿ ಇತರರ ಜತೆಗೆ ಬಂದಿದ್ದಳು. ಆ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತರು ಮಹಿಳೆಗೆ ಬಲವಂತವಾಗಿ ಗುಳಿಗೆಯೊಂದನ್ನು ತಿನ್ನಿಸಿದರು. ಗುಳಿಗೆ ತಿಂದ ತಕ್ಷಣ ಪ್ರಜ್ಞೆ ತಪ್ಪಿತು ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾಳೆ.
ಪ್ರಜ್ಞೆ ಮರುಕಳಿಸಿದಾಗ ಅತ್ಯಾಚಾರ ಎಸಗಿ ನಿರ್ಜನ ಪ್ರದೇಶದಲ್ಲಿ ಬಿಟ್ಟು ಹೋಗಿರುವುದು ಮನವರಿಕೆಯಾಯಿತು ಎಂದು ಮಹಿಳೆ ವಿವರಿಸಿದ್ದಾಳೆ. ಮಹಿಳೆಯ ದೂರಿನ ಹಿನ್ನೆಲೆಯಲ್ಲಿ ಮನೇಸರ್ ಮಹಿಳಾ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ಡಿ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ಪತ್ತೆಗೆ ಜಾಲ ಹೆಣೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂಥದ್ದೇ ಘಟನೆಯಲ್ಲಿ ಕಳೆದ ವರ್ಷ ಇದೇ ಗ್ರಾಮದಲ್ಲಿ ಆಟೊದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂವರು ಅತ್ಯಾಚಾರ ಎಸಗಿದ್ದರು. ಸಂತ್ರಸ್ತೆ ದಾರಿಹೋಕರ ನೆರವಿನಿಂದ ಪತಿಯನ್ನು ಸಂಪರ್ಕಿಸಿದ್ದಾಳೆ. ಇದಕ್ಕೂ ಮುನ್ನ ಮಹಿಳೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪತಿಯನ್ನು ಕಚೇರಿಗೆ ಕರೆಸಿಕೊಂಡಿದ್ದಳು. ಪತಿ ಆಗಮಿಸಿ, ಇಎಸ್ಐಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ, ಆಟೊದಲ್ಲಿ ತೆರಳುವಂತೆ ಸೂಚಿಸಿದ್ದ ಎಂದು ಪೊಲೀಸರು ವಿವರಿಸಿದ್ದಾರೆ. ರಾತ್ರಿ ಎಂಟು ಗಂಟೆ ವೇಳೆಗೆ ಮನೆಗೆ ಕರೆತಂದ ಬಳಿಕ ಎರಡು ದಿನಗಳ ಕಾಲ ತೀವ್ರ ನೋವು ಮತ್ತು ರಕ್ತಸ್ರಾವ ಇದ್ದ ಹಿನ್ನೆಲೆಯಲ್ಲಿ ಮತ್ತೆ ಇಎಸ್ಐಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸಲಹೆ ನೀಡಿದರು ಎನ್ನಲಾಗಿದೆ.