ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ಭಾರತ ‘ಹಿಂದು ಪಾಕಿಸ್ತಾನ’ ಆಗಬಹುದು: ತರೂರ್
ತಿರುವನಂತಪುರಂ, ಜು.12: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು ಬಂದರೆ ಅಲ್ಪಸಂಖ್ಯಾತರ ಹಕ್ಕುಗಳ ದಮನವಾಗಿ ಭಾರತ ಒಂದು ‘‘ಹಿಂದು ಪಾಕಿಸ್ತಾನ’’ ಆಗಬಹುದು ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.
ಅವರ ಹೇಳಿಕೆ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆಯಲ್ಲದೆ, ತರೂರ್ ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ಷಮೆ ಯಾಚಿಸಬೇಕು ಎಂದು ಪಕ್ಷ ಆಗ್ರಹಿಸಿದೆ.
ತಿರುವನಂತಪುರಂನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸಿದ ತರೂರ್, ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಲ್ಲಿ ಅದು ಹೊಸ ಸಂವಿಧಾನವನ್ನು ಬರೆದು ಭಾರತವನ್ನು ಕಡಿಮೆ ಸಹಿಷ್ಣುತೆಯಿರುವ ದೇಶವನ್ನಾಗಿ ಮಾಡುವುದು ಎಂದಿದ್ದಾರೆ.
‘‘ಅವರು ಮತ್ತೆ ಗೆದ್ದರೆ, ಸಂವಿಧಾನ ಬದುಕುಳಿಯುವುದಿಲ್ಲ ಹಾಗೂ ಅವರು ಭಾರತದ ಸಂವಿಧಾನವನ್ನು ಹರಿದು ಹಾಕಿ ಹೊಸ ಸಂವಿಧಾನ ರಚಿಸಲು ಎಲ್ಲಾ ಅನುಕೂಲತೆಗಳನ್ನೂ ಸೃಷ್ಟಿಸಿಕೊಳ್ಳುತ್ತಾರೆ’’ ಎಂದು ತರೂರ್ ಹೇಳಿದ್ದಾರೆ.
‘‘ಬಿಜೆಪಿ ಹೀಗೆ ರಚಿಸುವ ಸಂವಿಧಾನ ಹಿಂದು ರಾಷ್ಟ್ರ ತತ್ವದ ಆಧರಿತವಾಗಿರಲಿದ್ದು, ಅಲ್ಲಿ ಅಲ್ಪಸಂಖ್ಯಾತರಿಗೆ ಸಮಾನತೆಯನ್ನು ತೆಗೆದು ಹಾಕಲಾಗುವುದು. ಇದರಿಂದ ಹಿಂದು ಪಾಕಿಸ್ತಾನವೊಂದು ರಚಿತವಾಗುವುದು. ಇದಕ್ಕಾಗಿ ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ಪಟೇಲ್, ಮೌಲಾನ ಆಝಾದ್ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರು ಹೋರಾಟ ನಡೆಸಿರಲಿಲ್ಲ’’ ಎಂದು ತರೂರ್ ಅಭಿಪ್ರಾಯ ಪಟ್ಟಿದ್ದಾರೆ.