ಆಝಾನ್ ಸಂದರ್ಭ ಭಾಷಣ ಮಾಡುತ್ತಿದ್ದ ಮೇಯರ್ ರನ್ನು ತಡೆದ ಆದಿತ್ಯ ಠಾಕ್ರೆ
ಬಾಳಾಸಾಹೇಬ್ ಕಲಿಸಿಕೊಟ್ಟಿದ್ದಾರೆ ಎಂದ ಶಿವಸೇನೆ ನಾಯಕ
ಔರಂಗಬಾದ್, ಡಿ.25: ಆಝಾನ್ ಮೊಳಗುತ್ತಿದ್ದ ಸಂದರ್ಭ ಮಾತನಾಡುತ್ತಿದ್ದ ಮೇಯರ್ ಒಬ್ಬರಿಗೆ ಶಿವಸೇನೆ ನಾಯಕ ಮತ್ತು ಯುವ ಸೇನೆ ಮುಖ್ಯಸ್ಥ ಆದಿತ್ಯ ಠಾಕ್ರೆ ಭಾಷಣ ನಿಲ್ಲಿಸುವಂತೆ ಹೇಳಿದ ಬಗ್ಗೆ ವರದಿಯಾಗಿದೆ.
“ಹಿಂದುತ್ವ ನಮ್ಮ ರಾಷ್ಟ್ರೀಯತೆ, ಯಾರಿಗಾದರೂ ರಾಷ್ಟ್ರೀಯತೆಯ ಸರ್ಟಿಫಿಕೆಟ್ ನೀಡುವುದು ಸರಿಯಲ್ಲ. ಆಝಾನ್ ಮೊಳಗುತ್ತಿರುವ ಸಂದರ್ಭ ಭಾಷಣ ಮಾಡಬಾರದು ಎಂಬುದನ್ನು ನಾನು ನನ್ನ ತಾತ ಬಾಳಾಸಾಹೇಬ್ ಠಾಕ್ರೆಯವರಿಂದ ಕಲಿತೆ. ಆದ್ದರಿಂದ ನಾನು ಮೇಯರ್ ರ ಭಾಷಣವನ್ನು ನಿಲ್ಲಿಸಿದೆ” ಎಂದು ಉದ್ಧವ್ ಠಾಕ್ರೆಯವರ ಪುತ್ರ ಆದಿತ್ಯ ಠಾಕ್ರೆ ಹೇಳಿದರು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಜ್ಜ ಬಾಳಾ ಸಾಹೇಬ್ ಠಾಕ್ರೆಯವರು ಇದನ್ನು ಕಲಿಸಿಕೊಟ್ಟಿದ್ದಾರೆ ಎಂದ ಆದಿತ್ಯ ಠಾಕ್ರೆಯವರ ಹೇಳಿಕೆಯ ಬಗ್ಗೆ ಎಐಎಂಐಎಂ ಸದಸ್ಯ ಇಮ್ತಿಯಾಝ್ ಜಲೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿಟಿ ಬಸ್ ಸಾರಿಗೆ ಸೇವೆಯನ್ನು ಉದ್ಘಾಟಿಸಲು ಅವರು ಔರಂಗಬಾದ್ ಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಸ್ಪೀಕರ್ ಹರಿಭಾವ್, ಸಂಸದ ಚಂದ್ರಕಾಂತ್ ಖೈರೆ, ಮೇಯರ್ ನಂದಕುಮಾರ್, ಶಾಸಕ ಅತುಲ್ ಸಾವೆ ಹಾಗು ಮತ್ತೋರ್ವ ಶಾಸಕ ಇಮ್ತಿಯಾಝ್ ಜಲೀಲ್ ಉಪಸ್ಥಿತರಿದ್ದರು.