ಬಿಜೆಪಿ ನಾಯಕರು ಹನುಮಂತನ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದರೂ ಸಂಘಪರಿವಾರ ಮೌನ
ಶಂಕರಾಚಾರ್ಯ ಸ್ವಾಮೀಜಿ ಆಕ್ರೋಶ
ಮಥುರ,ಡಿ.25: ಹನುಮಂತನ ಬಗ್ಗೆ ನೀಡಿರುವ ಹೇಳಿಕೆಗಳಿಗೆ ಬಿಜೆಪಿ ನಾಯಕರು ಸ್ಪಷ್ಟೀಕರಣ ನೀಡಬೇಕೆಂದು ಶಂಕರಾಚಾರ್ಯ ಅಧೋಕ್ಷಜಾನಂದ ಸ್ವಾಮಿ ಆಗ್ರಹಿಸಿದ್ದಾರೆ.
ಉತ್ತರ ಪ್ರದೇಶದ ಧಾರ್ಮಿಕ ವ್ಯವಹಾರಗಳ ಸಚಿವ ಲಕ್ಷ್ಮಿ ನಾರಾಯಣ ಚೌಧರಿಯವರು ಹನುಮಂತ ಜಾಟ್ ಸಮುದಾಯಕ್ಕೆ ಸೇರಿದವ. ಜಾಟರಂತೆ ಆತ ಕೂಡಾ ಎಂದೂ ಅನ್ಯಾಯವನ್ನು ಸಹಿಸುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಬಿಜೆಪಿ ನಾಯಕರಿಂದ ಸ್ಪಷ್ಟೀಕರಣಕ್ಕೆ ಆಗ್ರಹಿಸಿದ್ದಾರೆ. ಇದಕ್ಕೂ ಮೊದಲು, ಬಿಜೆಪಿ ಎಂಎಲ್ಸಿ ಬುಕ್ಕಲ್ ನವಾಬ್ ಹನುಂತನನ್ನು ಮುಸಲ್ಮಾನ ಎಂದು ವ್ಯಾಖ್ಯಾನಿಸಿದ್ದರು. ಮುಸ್ಲಿಂ ಸಮುದಾಯದ ಹೆಸರುಗಳಾದ ರಹ್ಮಾನ್, ಅರ್ಮಾನ್, ಕುರ್ಬಾನ್ ಇತ್ಯಾದಿಗಳು ಹನುಮಂತನ ಹೆಸರಿನೊಂದಿಗೆ ಹೋಲಿಕೆಯಾಗುತ್ತವೆ ಎಂದು ಅವರು ಸಮರ್ಥನೆ ನೀಡಿದ್ದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹನುಮಂತ ಓರ್ವ ಕಾಡಿನ ಜೀವಿಸಿದ್ದ, ವಂಚಿತ ದಲಿತ ಎಂದು ತಿಳಿಸಿದ್ದರೆ, ಉತ್ತರ ಪ್ರದೇಶ ಕ್ರೀಡಾ ಸಚಿವ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಹನುಮಂತ ಓರ್ವ ಕ್ರೀಡಾಳು ಎಂದು ಹೇಳಿಕೆ ನೀಡಿದ್ದರು. ಈ ಎಲ್ಲ ಹೇಳಿಕೆಗಳಿಂದ ಆಕ್ರೋಶಿತರಾಗಿರುವ ಅಧೋಕ್ಷಜಾನಂದ ಸ್ವಾಮಿ, ಪಕ್ಷದ ನಾಯಕರು ಹಿಂದು ದೇವತೆಗಳ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದರೂ ಬಿಜೆಪಿಯಾಗಲೀ, ಸಂಘ ಪರಿವಾರವಾಗಲೀ ಒಂದು ಶಬ್ದವನ್ನೂ ಮಾತನಾಡದಿರುವುದು ಅದಕ್ಕೆ ರಾಮ ಮಂದಿರ ವಿಷಯ ಮತ ಗಳಿಸುವ ಒಂದು ಸಾಧನವಷ್ಟೇ ಎಂಬುದನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದ್ದಾರೆ.