ವಂದೇ ಭಾರತ್ ರೈಲಿಗೆ ಸಿಡಿದ ಕಲ್ಲುಚೂರು: ಕಿಟಕಿಗಳಿಗೆ ಹಾನಿ
ಅಚಾಲ್ಡ, ಫೆ.24: ಚಲಿಸುತ್ತಿದ್ದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಕಲ್ಲು ಚೂರುಗಳು ಸಿಡಿದು ಚಾಲಕನ ಸ್ಕ್ರೀನ್ ಮತ್ತು ಬದಿಯ ಕಿಟಕಿ ಜಖಂಗೊಂಡಿರುವ ಘಟನೆ ಉತ್ತರ ಪ್ರದೇಶದ ಅಚಾಲ್ಡದಲ್ಲಿ ನಡೆದಿದೆ.
ಪಕ್ಕದ ಲೇನ್ ನಲ್ಲಿ ವೇಗವಾಗಿ ಚಲಿಸುತ್ತಿದ್ದ ದಿಬ್ರೂಘರ್ ರಾಜಧಾನಿ ಎಕ್ಸ್ಪ್ರೆಸ್ ರೈಲಿಗೆ ಕ್ರಾಸಿಂಗ್ ಕೊಡುವ ವೇಳೆ ಜಾನುವಾರು ಹಾದು ಹೋದ ಪರಿಣಾಮವಾಗಿ ಈ ಘಟನೆ ಸಂಭವಿಸಿದೆ. ಕಲ್ಲಿನ ಚೂರುಗಳು ಚಾಲಕನ ವಿಂಡ್ ಸ್ಕ್ರೀನ್ ಹಾಗೂ ವಿವಿಧ ಬೋಗಿಗಳ ಕಿಟಕಿಗಳಿಗೆ ಸಿಡಿದಿವೆ.
ಪ್ರಯಾಣದ ತಾಂತ್ರಿಕ ತಂಡ ವಂದೇ ಭಾರತ್ ರೈಲಿಗೆ ಆದ ಹಾನಿಯನ್ನು ಅಂದಾಜು ಮಾಡುತ್ತಿದ್ದಾರೆ. ತೀವ್ರ ಪರಿಶೀಲನೆ ಬಳಿಕ ರೈಲು ಸಂಚಾರಕ್ಕೆ ಯೋಗ್ಯ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಮಾಮೂಲಿ ವೇಗದಲ್ಲಿ ಯಾನ ಮುಂದುವರಿಸಲಾಯಿತು. ರಾತ್ರಿ 11:05ರ ವೇಳೆಗೆ ಹೊಸದಿಲ್ಲಿ ರೈಲು ನಿಲ್ದಾಣಕ್ಕೆ ರೈಲು ತಲುಪಿದೆ ಎಂದು ಅಧಿಕೃತ ಪ್ರಕಟನೆ ಹೇಳಿದೆ.
ಹಾನಿಗೀಡಾದ ಕಿಟಕಿಗಳಿಗೆ ಸುರಕ್ಷಾ ಶೀಟುಗಳನ್ನು ಅಳವಡಿಸಿ ಪ್ರಯಾಣ ಮುಂದುವರಿಸಲಾಗಿದ್ದು, ಪ್ರಯಾಣಿಕರಿಗೆ ಯಾವುದೇ ಅನಾನುಕೂಲವಾಗಿಲ್ಲ ಎಂದು ಉತ್ತರ ರೈಲ್ವೆ ಸಿಪಿಆರ್ಓ ಪ್ರಕಟಿಸಿದ್ದಾರೆ.