ಮಸೂದ್ ಅಝರ್ನನ್ನು ಜೈಲಿನಿಂದ ಬಿಡುಗಡೆಗೊಳಿಸಿದ್ದು ಯಾರು: ಮೋದಿಗೆ ರಾಹುಲ್ ಪ್ರಶ್ನೆ
ಹಾವೇರಿ, ಮಾ.9: ಉಗ್ರಗಾಮಿ ಸಂಘಟನೆಯಾದ ಜೈಷೆ ಮುಹಮ್ಮದ್ (ಜೆಇಎಂ)ನ ಮುಖ್ಯಸ್ಥ ಮಸೂದ್ ಅಝರ್ ನನ್ನು ಭಾರತದ ಜೈಲಿನಿಂದ ಬಿಡುಗಡೆಗೊಳಿಸಿದ್ದು, ಬಿಜೆಪಿ ಸರಕಾರ ಎಂದು ಪ್ರಧಾನಿ ಮೋದಿ ದೇಶಕ್ಕೆ ತಿಳಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಉತ್ತರಕರ್ನಾಟಕದ ಹಾವೇರಿಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ಭಾರತದ ಜೈಲಿನಲ್ಲಿದ್ದ ಅಝರ್ ನನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದ್ದು ಯಾರು ಎಂದು ಪ್ರಧಾನಿಯವರು ಉತ್ತರಿಸಬೇಕು ಎಂದು ಆಗ್ರಹಿಸಿದರು. ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ ಜೆಇಎಂ ಉಗ್ರ ಸಂಘಟನೆಯ ಮುಖ್ಯಸ್ಥನ ಹೆಸರೇನೆಂಬ ಸಣ್ಣ ಪ್ರಶ್ನೆಯೊಂದಕ್ಕೆ ಮೋದಿ ಉತ್ತರಿಸಬೇಕಿದೆ. ಭಾರತದ ಜೈಲಿನಲ್ಲಿದ್ದ ಅಝರ್ನನ್ನು 1999ರಲ್ಲಿ ಬಿಜೆಪಿ ಸರಕಾರ ಅಪ್ಘಾನಿಸ್ತಾನದ ಕಂದಹಾರ್ ಮೂಲಕ ಪಾಕಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಈ ಬಗ್ಗೆ ಮೋದಿ ಯಾಕೆ ಮಾತಾಡುತ್ತಿಲ್ಲ. ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ ವ್ಯಕ್ತಿಯನ್ನು ಭಾರತದ ಜೈಲಿನಿಂದ ಬಿಡುಗಡೆಗೊಳಿಸಿ ಪಾಕಿಸ್ತಾನಕ್ಕೆ ಕಳುಹಿಸಿದ್ದು ಬಿಜೆಪಿ ಸರಕಾರ ಎಂದು ನೀವೇಕೆ ಹೇಳುತ್ತಿಲ್ಲ. ಮೋದಿಯವರೇ, ನಾವು ನಿಮ್ಮ ಹಾಗಲ್ಲ. ನಾವೆಂದೂ ಭಯೋತ್ಪಾದಕರ ಎದುರು ತಲೆ ಬಾಗಿಸಿಲ್ಲ ಎಂದು ರಾಹುಲ್ ಹೇಳಿದರು.