ವಾಯು ದಾಳಿ ನಿರ್ಣಾಯಕ ಹೆಜ್ಜೆ: ವಿ.ಕೆ. ಸಿಂಗ್
ಹೊಸದಿಲ್ಲಿ, ಮಾ. 11: ಭಾರತೀಯ ವಾಯು ಪಡೆ ಫೆಬ್ರವರಿ 26ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿರುವ ಜೈಶೆ ಮುಹಮ್ಮದ್ನ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯು ದಾಳಿ ನಿರ್ಣಾಯಕ ಹೆಜ್ಜೆ ಹಾಗೂ ಭಯೋತ್ಪಾದನೆ ವಿರುದ್ಧ ಭಾರತ ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ಪ್ರತಿಬಿಂಬಿಸಿದೆ ಎಂದು ಕೇಂದ್ರ ಸಚಿವ ವಿ.ಕೆ. ಸಿಂಗ್ ಸೋಮವಾರ ಹೇಳಿದ್ದಾರೆ.
ಲೋಕಸಭಾ ಚುನಾವಣೆಯನ್ನು ಉಲ್ಲೇಖಿಸಿದ ಅವರು, ರಾಷ್ಟ್ರೀಯ ಭದ್ರತೆಯ ಕುರಿತಂತೆ ಕಠಿಣ ಕ್ರಮ ತೆಗೆದುಕೊಳ್ಳುವ ಹಾಗೂ ಇದೇ ವಿಷಯಕ್ಕೆ ಸಂಬಂಧಿಸಿ ನಿರ್ಲಕ್ಷದಿಂದ ವರ್ತಿಸುವ ಸರಕಾರದ ನಡುವೆ ಜನರು ಮತ ಚಲಾಯಿಸುವ ಮೂಲಕ ಆಯ್ಕೆ ಮಾಡುವರು ಎಂದರು. ‘‘ಗಾಝಿಯಾಬಾದ್ನಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಜನರಲ್ಲಿ ಯಾವ ರೀತಿಯ ಸರಕಾರ ಬೇಕೆಂದು ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಭದ್ರತೆ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವ ಸರಕಾರ ಅಥವಾ ಇದೇ ವಿಷಯದಲ್ಲಿ ನಿರ್ಲಕ್ಷ ತೋರುವ ಸರಕಾರ. ಜನರು ಇದಕ್ಕೆ ಉತ್ತರಿಸಲಿದ್ದಾರೆ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ’’ ಎಂದು ಸಿಂಗ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಅನ್ನು ಉಲ್ಲೇಖಿಸಿದ ಸಚಿವರು, ಈ ಸರಕಾರದ ಆಡಳಿತಾವಧಿಯಲ್ಲಿ ಉತ್ತಮ ಕೆಲಸಗಳಾಗಿವೆ ಎಂದರು.