ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ನೀಡಿದ ಬೆಂಬಲ ವಾಪಸ್ ಪಡೆಯಲಿದೆಯೇ ಬಿಎಸ್ಪಿ?
ಮಾಯಾವತಿ ಕೋಪಕ್ಕೆ ಕಾರಣ ಇಲ್ಲಿದೆ…
ಲಕ್ನೋ,ಎ.30: ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಲೋಕೇಂದ್ರ ಸಿಂಗ್ ಅವರು ಕಣದಿಂದ ಹಿಂದೆ ಸರಿದಿರುವ ಹಿನ್ನೆಲೆಯಲ್ಲಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು,ಆ ರಾಜ್ಯದಲ್ಲಿಯ ಕಾಂಗ್ರೆಸ್ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಪುನರ್ಪರಿಶೀಲಿಸುವುದಾಗಿ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಆಡಳಿತ ಯಂತ್ರವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಮಂಗಳವಾರ ಟ್ವೀಟ್ನಲ್ಲಿ ಆರೋಪಿಸಿರುವ ಅವರು, ಆಡಳಿತ ಯಂತ್ರವನ್ನು ದುರುಪಯೋಗಿಸಿಕೊಳ್ಳುವುದರಲ್ಲಿ ಕಾಂಗ್ರೆಸ್ ಬಿಜೆಪಿಗಿಂತೇನೂ ಕಡಿಮೆಯಿಲ್ಲ. ಗುನಾದ ಬಿಎಸ್ಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್ ಬಲವಂತಗೊಳಿಸಿದೆ. ಆದರೆ ಬಿಎಸ್ಪಿ ತನ್ನ ಸ್ವಂತ ಚಿಹ್ನೆಯಲ್ಲಿ ಹೋರಾಡುವ ಮೂಲಕ ಸೂಕ್ತ ಉತ್ತರ ನೀಡಲಿದೆ ಮತ್ತು ಕಾಂಗ್ರೆಸ್ ಸರಕಾರಕ್ಕೆ ತನ್ನ ಬೆಂಬಲವನ್ನು ಪುನರ್ ಪರಿಶೀಲಿಸಲಿದೆ ಎಂದಿದ್ದಾರೆ.
ಗುನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರೆದುರು ಸ್ಪರ್ಧಿಸಿದ್ದ ಸಿಂಗ್ ಸೋಮವಾರ ಕಣದಿಂದ ಹೊರಬಿದ್ದಿದ್ದರು. ಈ ಕ್ಷೇತ್ರದಲ್ಲಿ ಮೇ 12ರಂದು ಮತದಾನ ನಡೆಯಲಿದೆ.