ಅಧಿಕಾರಿಗಳು ಗೌರವಿಸದಿದ್ದರೆ ಶೂನಿಂದ ಹೊಡೆಯಿರಿ: ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಶಾಸಕ ಸಲಹೆ
ಲಕ್ನೋ, ಜೂ.7: ಸರಕಾರಿ ಅಧಿಕಾರಿಗಳು ಗೌರವ ನೀಡದಿದ್ದರೆ ಅವರಿಗೆ ಶೂನಿಂದ ಹೊಡೆಯಿರಿ ಎಂದು ಬಿಜೆಪಿ ಶಾಸಕ ರಾಮರತನ್ ಕುಶ್ವಾಹ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದ ಸಿದ್ಧಾಂತಗಳನ್ನು ಬೆಂಬಲಿಸುವ ಅಧಿಕಾರಿಗಳಿಗೂ ಕುಶ್ವಾಹ ತನ್ನ ಬಗ್ಗೆ ಎಚ್ಚರಿಕೆಯಿಂದಿರುವಂತೆ ಬೆದರಿಕೆಯೊಡ್ಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ. ಸರಕಾರಿ ಅಧಿಕಾರಿಗಳು ನಿಮ್ಮನ್ನು ಗೌರವಿಸದಿದ್ದರೆ ನಿಮ್ಮ ಶೂ ತೆಗೆದು ಅವರಿಗೆ ಬಾರಿಸಿ. ಯಾಕೆಂದರೆ ತಾಳ್ಮೆಗೂ ಒಂದು ಮಿತಿಯಿರುತ್ತದೆ ಎಂದು ಲಲಿತ್ಪುರ್ ಶಾಸಕ ಕುಶ್ವಾಹ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ತಿಳಿಸಿದ್ದಾರೆ. ಎಸ್ಪಿ ಮತ್ತು ಬಿಎಸ್ಪಿ ಸಿದ್ಧಾಂತವನ್ನು ಹೊಂದಿರುವ ಸರಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಚುನಾವಣೆಯ ಸಮಯದಲ್ಲಿ ಬಿಜೆಪಿಯ ಕಾರ್ಯಕರ್ತರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ, ನಮ್ಮ ಸ್ವಯಂ ಸೇವಕರಿಗೆ ಬೆದರಿಕೆಯೊಡ್ಡಿದ್ದಾರೆ ಮತ್ತು ಅವರು ಬೇರೆ ಪಕ್ಷ ಸೇರುವಂತೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ ಎಂದು ಕುಶ್ವಾಹ ತಿಳಿಸಿದ್ದಾರೆ. 2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಮರತನ್ ಕುಶ್ವಾಹ ಲಲಿತ್ಪುರ್ನಿಂದ ಭರ್ಜರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.