ಪುತ್ರ ಬಿನೋಯ್ನನ್ನು ರಕ್ಷಿಸುವುದಿಲ್ಲ: ಕೊಡಿಯೇರಿ ಬಾಲಕೃಷ್ಣನ್
ಅತ್ಯಾಚಾರ ಆರೋಪ
ಬಿನೋಯ್
ತಿರುವನಂತಪುರ, ಜೂ. 22: ಅತ್ಯಾಚಾರ ಹಾಗೂ ವಂಚನೆಯ ಆರೋಪಕ್ಕೆ ಒಳಗಾದ ತನ್ನ ಪುತ್ರನನ್ನು ರಕ್ಷಿಸಲು ತಾನಾಗಲಿ, ತನ್ನ ಪಕ್ಷವಾಗಲಿ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಸಿಪಿಎಂನ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ.
ಹಿರಿಯ ಪುತ್ರ ಬಿನೋಯ್ ಕೊಡಿಯೇರಿ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ 33 ವರ್ಷದ ಮಹಿಳೆಯನ್ನು ತನ್ನ ಕುಟುಂಬ ಸಂಪರ್ಕಿಸಿದೆ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ. ‘‘ನಾನಾಗಲಿ, ನನ್ನ ಪಕ್ಷವಾಗಲಿ ಬಿನೋಯ್ಯನ್ನು ರಕ್ಷಿಸುವುದಿಲ್ಲ. ಆತ ಪ್ರಬುದ್ಧ. ಆತ ಸ್ವತಂತ್ರವಾಗಿ ಬದುಕುತ್ತಿದ್ದಾನೆ ಹಾಗೂ ಎಲ್ಲದಕ್ಕೂ ಆತನೇ ಜವಾಬ್ದಾರಿ.’’ ಎಂದು ಬಾಲಕೃಷ್ಣನ್ ತಿರುವನಂತಪುರದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬಿನೋಯ್ ಎಲ್ಲಿದ್ದಾನೆ ಎಂಬುದೇ ನನಗೆ ತಿಳಿದಿಲ್ಲ ಎಂದು ಅವರು ಹೇಳಿದರು. ಪತ್ರಕರ್ತರು ನಿರಂತರ ಪ್ರಶ್ನಿಸಿದಾಗ ಅವರು, ಆತ ಮುಂಬೈಯ ಪೊಲೀಸ್ ಅಧಿಕಾರಿಯಲ್ಲ ಎಂದು ಕಟುವಾಗಿ ಉತ್ತರಿಸಿದರು. ಕೆಲವು ದಿನಗಳ ಹಿಂದೆ ಈ ವಿವಾದ ಹುಟ್ಟಿಕೊಂಡ ಬಳಿಕ ಮೊದಲ ಬಾರಿಗೆ ಮಾಧ್ಯಮ ಉದ್ದೇಶಿಸಿ ಮಾತನಾಡಿದ ಅವರು, “ಕೆಲವು ದಿನಗಳಿಂದ ನಾನು ಅವನನ್ನು ನೋಡಿಲ್ಲ” ಎಂದರು.
ವಿವಾಹವಾಗುವುದಾಗಿ ಭರವಸೆ ನೀಡಿ ಬಿನೋಯ್ ಕೋಡಿಯೇರಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮುಂಬೈಯ ಮಾಜಿ ಬಾರ್ ಡ್ಯಾನ್ಸರ್ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ತಮಗೆ 8 ವರ್ಷದ ಪುತ್ರನಿದ್ದಾನೆ ಎಂದು ಕೂಡ ಅವರು ಆರೋಪಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಿನೋಯ್ ಕೋಡಿಯೇರಿಗೆ ನೋಟಿಸ್ ಜಾರಿ ಮಾಡಿದ್ದರು. ಪ್ರಕರಣದ ತನಿಖಾಧಿಕಾರಿಯ ಮುಂದೆ 72 ಗಂಟೆಗಳ ಒಳಗೆ ಹಾಜರಾಗುವಂತೆ ಸೂಚಿಸಿದ್ದರು.