ಭಾರತ ವಕೀಲರಿಗೆ ಖರ್ಚು ಮಾಡಿದ್ದು 1 ರೂ., ಪಾಕಿಸ್ತಾನ ಖರ್ಚು ಮಾಡಿದ್ದು ಕೋಟ್ಯಾಂತರ ರೂ.
ಕುಲಭೂಷಣ್ ಜಾಧವ್ ಪ್ರಕರಣ
ಹೊಸದಿಲ್ಲಿ, ಜು.18: ನೆದರ್ಲ್ಯಾಂಡ್ನ ಹೇಗ್ನಲ್ಲಿರುವ ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ ಮಾಜಿ ನೌಕಾಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ತನ್ನ ವಾದ ಮಂಡನೆಗೆ ಕೇವಲ ಒಂದು ರೂ. ಶುಲ್ಕ ಪಡೆದಿದ್ದರು. ಮತ್ತೊಂದೆಡೆ, ಪಾಕಿಸ್ತಾನವು, ಜಾಧವ್ ಓರ್ವ ಗೂಢಚಾರಿ ಎಂದು ಸಾಬೀತುಪಡಿಸಲು ತನ್ನ ವಕೀಲರಿಗೆ 20 ಕೋ.ರೂ.ಗೆ ಅಧಿಕ ಮೊತ್ತವನ್ನು ಖರ್ಚುಮಾಡಿದೆ.
ಹೇಗ್ನ ಅಂತರ್ರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತವನ್ನು ಪ್ರತಿನಿಧಿಸಲು ಸಾಳ್ವೆ ಕೇವಲ 1 ರೂ. ಶುಲ್ಕ ಪಡೆದಿದ್ದಾರೆ ಎಂಬ ಅಂಶವನ್ನು ಮಾಜಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ 2017ರ ಮೇ 15 ರಂದು ಟ್ವಿಟರ್ನ ಮೂಲಕ ಬಹಿರಂಗಪಡಿಸಿದ್ದರು.
ಸಾಳ್ವೆ ಇತರ ಪ್ರಕರಣದಲ್ಲಿ ಪ್ರತಿದಿನಕ್ಕೆ 30 ಲಕ್ಷ ರೂ. ಶುಲ್ಕ ನಿಗದಿಪಡಿಸಿದ್ದಾರೆ.
ಕಳೆದ ವರ್ಷ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಾಕಿಸ್ತಾನ ಸರಕಾರ ತನ್ನ ಬಜೆಟ್ ದಾಖಲೆಯನ್ನು ಸಲ್ಲಿಸಿದಾಗ ಹೇಗ್ನಲ್ಲಿ ಪಾಕ್ನ್ನು ಪ್ರತಿನಿಧಿಸುತ್ತಿರುವ ಇಂಗ್ಲೆಂಡ್ ಮೂಲದ ಬ್ಯಾರಿಸ್ಟರ್ ಖವರ್ ಖುರೇಶಿಗೆ 20 ಕೋ.ರೂ. ಶುಲ್ಕ ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿದೆ. ಕೆಂಬ್ರಿಡ್ಜ್ ಯುನಿವರ್ಸಿಟಿಯ ಕಾನೂನು ಪದವೀಧರ ಖುರೇಶಿ ಅಂತರ್ರಾಷ್ಟ್ರೀಯ ನ್ಯಾಯಾಯದಲ್ಲಿ ಪ್ರಕರಣವೊಂದರಲ್ಲಿ ಕಾನೂನು ಹೋರಾಟ ನಡೆಸುತ್ತಿರುವ ಯುವ ವಕೀಲರಾಗಿದ್ದಾರೆ.