ಜೇಟ್ಲಿ ಅಂತ್ಯಕ್ರಿಯೆ ವೇಳೆ ಸಂಸದ ಬಾಬುಲ್ ಸುಪ್ರಿಯೊ ಸೇರಿ ಹಲವು ಗಣ್ಯರ ಮೊಬೈಲ್ ಫೋನ್ ಕಳವು !
ಬಾಬುಲ್ ಸುಪ್ರಿಯೊ
ಹೊಸದಿಲ್ಲಿ : ಇತ್ತೀಚೆಗೆ ನಿಧನರಾದ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಅಂತ್ಯಕ್ರಿಯೆ ರಾಜಧಾನಿಯ ನಿಗಮ್ಬೋಧ್ ಘಾಟ್ ನಲ್ಲಿ ನಡೆಯುತ್ತಿದ್ದ ವೇಳೆ ಭಾರೀ ಜನಸಂದಣಿಯ ಮಧ್ಯೆ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೊ ಹಾಗೂ ಪತಂಜಲಿ ವಕ್ತಾರ ಎಸ್ ಕೆ ತಿಜಾರವಾಲ ಅವರ ಹೊರತಾಗಿ ಸುಮಾರು 11 ಮಂದಿ ತಮ್ಮ ಮೊಬೈಲ್ ಫೋನುಗಳನ್ನು ಕಳೆದುಕೊಂಡಿದ್ದಾರೆ.
ಸೋಮವಾರ ತಿಜಾರವಾಲ ತಾವು ಹಾಗೂ ಹಲವು ಮಂದಿ ಇತರರು ತಮ್ಮ ಮೊಬೈಲ್ ಫೋನ್ ಗಳನ್ನು ಜೇಟ್ಲಿ ಅಂತ್ಯಕ್ರಿಯೆ ವೇಳೆ ಕಳೆದುಕೊಂಡ ಕುರಿತಂತೆ ಬರೆದಿದ್ದಾರೆ.
ಬಿಜೆಪಿ ನಾಯಕ ಹಾಗೂ ಅಸನ್ಸೋಲ್ ಸಂಸದ ಬಾಬುಲ್ ಸುಪ್ರಿಯೊ ಕೂಡ ತಮ್ಮ ಫೋನ್ ಕಳೆದುಕೊಂಡಿದ್ದಾರೆಂದು ಅವರು ಬರೆದು ತಮ್ಮ ಟ್ವೀಟ್ ಜತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದಿಲ್ಲಿ ಪೊಲೀಸರನ್ನೂ ಟ್ಯಾಗ್ ಮಾಡಿದ್ದಾರೆ.
''ನಾವೆಲ್ಲರೂ ಜೇಟ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾಗ ನಾನು ಈ ಫೋಟೋ ತೆಗೆದ ಫೋನ್ ಕೂಡ ನನಗೆ ಗುಡ್ ಬೈ ಹೇಳಿತು. ಕೆಲವರು ರುದ್ರಭೂಮಿಯಲ್ಲೂ ತಮ್ಮ ಕೈಚಳಕ ತೋರಿಸಿ ಕಳವು ನಡೆಸುತ್ತಿದ್ದಾರೆಂಬುದು ಖೇದಕರ'' ಎಂದು ಟ್ವೀಟ್ ಮಾಡಿದ ತಿಜಾರವಾಲ ತಮ್ಮ ಕಳೆದು ಹೋದ ಫೋನ್ ನ ಈಗಿನ ಲೊಕೇಶನ್ ಅನ್ನೂ ಶೇರ್ ಮಾಡಿದ್ದಾರೆ.
ಮೊಬೈಲ್ ಫೋನ್ ಕಳೆದು ಹೋಗಿರುವ ಬಗ್ಗೆ ಸುಪ್ರಿಯೊ ಸೇರಿದಂತೆ 5 ಜನರ ದೂರುಗಳು ಬಂದಿವೆ ಹಾಗೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.