ಕರ್ತಾರ್ಪುರ ಕಾರಿಡಾರ್ ಉದ್ಘಾಟನೆ: ಪಾಕ್ ಆಹ್ವಾನಕ್ಕೆ ಮನಮೋಹನ್ ಸಿಂಗ್ ಪ್ರತಿಕ್ರಿಯೆ ಏನು?
ಇಸ್ಲಾಮಾಬಾದ್/ ಹೊಸದಿಲ್ಲಿ, ಅ.1: ಗುರುನಾನಕ್ ಅವರ 550ನೇ ಜಯಂತಿ ಸಂದರ್ಭದಲ್ಲಿ ಕರ್ತಾರ್ಪುರ ಕಾರಿಡಾರ್ ಯೋಜನೆಯ ಉದ್ಘಾಟನಾ ಸಮಾರಂಭಕ್ಕೆ ಪಾಕಿಸ್ತಾನ ನೀಡಿರುವ ಆಹ್ವಾನವನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿರಾಕರಿಸುವ ಸಾಧ್ಯತೆ ಇದೆ.
ಸಮಾರಂಭಕ್ಕೆ ಸಿಂಗ್ ಅವರನ್ನು ಆಹ್ವಾನಿಸಲು ನಿರ್ಧರಿಸಿದ್ದಾಗಿ ಪಾಕಿಸ್ತಾನ ಸೋಮವಾರ ಪ್ರಕಟಿಸಿತ್ತು. ಎಲ್ಲ ಹಕ್ಕುದಾರರ ಜತೆ ಚರ್ಚಿಸಿದ ಬಳಿಕ ಸಿಂಗ್ ಅವರನ್ನು ಆಹ್ವಾನಿಸಲು ಸರ್ಕಾರ ನಿರ್ಧರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮುಹಮ್ಮದ್ ಖುರೇಷಿ ಪ್ರಕಟಿಸಿದ್ದರು. ಸಿಂಗ್ ಅವರು ಸಿಕ್ಖ್ ಧರ್ಮಕ್ಕೆ ಸೇರಿದವರು. ಅವರು ಸಿಕ್ಖ್ ಸಮುದಾಯದ ಪ್ರತಿನಿಧಿ ಎಂದು ಖುರೇಷಿ ಹೇಳಿದ್ದರು.
"ಕರ್ತಾರ್ಪುರ ಕಾರಿಡಾರ್ ವಿಶೇಷ ಸಂದರ್ಭವಾಗಿದ್ದು, ಭಾರತದ ಮಾಜಿ ಪ್ರಧಾನಿ ಈ ಐತಿಹಾಸಿಕ ಕ್ಷಣದ ಭಾಗವಾಗಬೇಕು ಎಂದು ಪಾಕಿಸ್ತಾನ ಬಯಸಿದೆ. ಸಿಂಗ್ ಅವರಿಗೆ ಅಧಿಕೃತ ಆಹ್ವಾನ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಸಿಂಗ್ ಅವರ ಪ್ರತಿಕ್ರಿಯೆ ಬಯಸಿದಾಗ, "ಇದುವರೆಗೆ ಯಾವ ಮಾಹಿತಿ ಅಥವಾ ಆಹ್ವಾನ ಬಂದಿಲ್ಲ. ಮಾಧ್ಯಮ ವರದಿಗಳಿಗೆ ಈಗಲೇ ಪ್ರತಿಕ್ರಿಯಿಸಲಾಗದು" ಎಂದು ಹೇಳಿದರು.