ಟಿಕೆಟ್ ನಿರಾಕರಿಸಲ್ಪಟ್ಟಿದ್ದಕ್ಕೆ ಮಾಜಿ ಸಚಿವನ ಬೆಂಬಲಿಗರಿಂದ ಬಿಜೆಪಿ ಅಭ್ಯರ್ಥಿಯ ಕಾರಿಗೆ ಹಾನಿ
Photo: ANI
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಪ್ರಕಾಶ್ ಮೆಹ್ತಾ ಅವರಿಗೆ ಬಿಜೆಪಿ ನಾಯಕತ್ವ ಘಾಟ್ಕೊಪರ್ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಿರುವುದರಿಂದ ಆಕ್ರೋಶಗೊಂಡಿರುವ ಅವರ ಬೆಂಬಲಿಗರು ಈ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿರುವ ಪರಾಗ್ ಶಾ ಅವರ ಕಾರನ್ನು ಪುಡಿಗಟ್ಟಿದ್ದಾರೆ. ಘಟನೆ ಶುಕ್ರವಾರ ಬೆಳಿಗ್ಗೆ 11.15ರ ಸುಮಾರಿಗೆ ನಡೆದಿದೆ.
ಶಾ ತಮ್ಮ ನಾಮಪತ್ರ ಸಲ್ಲಿಸಲು ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಶಾ ಅವರ ಕಾರನ್ನು ತಡೆಗಟ್ಟಿದ ಮೆಹ್ತಾ ಬೆಂಬಲಿಗರು ಕಾರಿನ ಗಾಜು ಮತ್ತು ಇತರ ಭಾಗಗಳಿಗೆ ಹಾನಿಯೆಸಗಿದ್ದಾರೆ. ಈ ಕ್ಷೇತ್ರದಿಂದ ಮೆಹ್ತಾ 2014ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಘಟನೆಯಲ್ಲಿ ಶಾಗೆ ಗಾಯಗಳಾಗದೇ ಇದ್ದರೂ ಆಕ್ರೋಶಿತರು ಅಲ್ಲಿಂದ ತೆರಳುವ ತನಕ ಅವರು ಕಾರಿನೊಳಗೆ ಕುಳಿತುಕೊಂಡಿದ್ದರು. ಮೆಹ್ತಾ ಬೆಂಬಲಿಗರು ಶಾ ವಿರುದ್ಧ ಘೋಷಣೆ ಕೂಗಿದರಲ್ಲದೆ ತಮ್ಮ ನಾಯಕನಿಗೆ ಟಿಕೆಟ್ ನಿರಾಕರಿಸಲು ಅವರೇ ಕಾರಣ ಎಂದು ಆರೋಪಿಸಿದರು.
ಘಟನೆಯಿಂದ ಸಂಚಾರ ಕೆಲ ಕಾಲ ಬಾಧಿತವಾಗಿತ್ತು.
Next Story