ಒಂದು ದಿನ ನೀವು ಬಂಧನ ಕೇಂದ್ರದಲ್ಲಿ ಇರುತ್ತೀರಿ: ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಅರುಂಧತಿ ರಾಯ್
ಹೊಸದಿಲ್ಲಿ, ಜ. 11: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿ ಬೂಕರ್ ಪ್ರಶಸ್ತಿ ಗೌರವಾನ್ವಿತೆ ಆರುಂಧತಿ ರಾಯ್ ಶನಿವಾರ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾಕ್ಕೆ ಭೇಟಿ ನೀಡಿದ್ದಾರೆ ಹಾಗೂ ನಾವೆಲ್ಲರೂ ಸಂಘಟಿತರಾದರೆ, ನಮ್ಮನ್ನು ಇರಿಸುವಷ್ಟು ದೊಡ್ಡ ಬಂಧನ ಕೇಂದ್ರಗಳು ಎಲ್ಲಿಯೂ ಇರಲಾರದು ಎಂದಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಆರುಂಧತಿ ರಾಯ್, ಬಹುಶಃ ಈ ಸರಕಾರ ಒಂದು ದಿನ ಬಂಧನ ಕೇಂದ್ರದಲ್ಲಿ ಇರಲಿದೆ. ಆಗ ನಾವೆಲ್ಲ ಸ್ವತಂತ್ರರಾಗಿರುತ್ತೇವೆ. ನಾವು ಎಂದಿಗೂ ಹಿಂದೆ ಸರಿಯಲಾರೆವು ಎಂದರು.
ಕಳೆದ ತಿಂಗಳು ಲೇಖಕರು ಹಾಗೂ ಚಿತ್ರ ಕಲಾವಿದರೊಂದಿಗೆ ಆರುಂಧತಿ ರಾಯ್, ಪೌರತ್ವ ತಿದ್ದುಪಡಿ ಕಾಯ್ದೆ ವಿಭಜನಿಯ, ತಾರತಮ್ಯ ಧೋರಣೆ ಹೊಂದಿದೆ ಹಾಗೂ ಅಸಾಂವಿಧಾನಿಕ ಎಂದು ಹೇಳಿದ್ದರು. ಅಲ್ಲದೆ, ಕಾಯ್ದೆ ಹಿಂಪಡೆಯುವಂತೆ ಸರಕಾರವನ್ನು ಆಗ್ರಹಿಸಿದ್ದರು.
ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ರಾಷ್ಟ್ರವ್ಯಾಪಿ ರಾಷ್ಟ್ರೀಯ ಪೌರತ್ವ ನೋಂದಣಿಯೊಂದಿಗೆ ಈ ಕಾನೂನು ದೇಶಾದ್ಯಂತದ ಜನರಿಗೆ ಸಾಕಷ್ಟು ದುಃಖ ತರಲಿದೆ ಎಂದು ಹೇಳಿತ್ತು.