ನಿರ್ಭಯಾ ಅತ್ಯಾಚಾರ-ಹತ್ಯೆ ಪ್ರಕರಣ: ಜನವರಿ 14ರಂದು ಇಬ್ಬರು ದೋಷಿಗಳ ಕ್ಯುರೇಟಿವ್ ಅರ್ಜಿ ವಿಚಾರಣೆ
ಹೊಸದಿಲ್ಲಿ, ಜ. 11: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾದ ನಾಲ್ವರು ದೋಷಿಗಳಲ್ಲಿ ಇಬ್ಬರು ಸಲ್ಲಿಸಿದ ಕ್ಯುರೇಟಿವ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎನ್.ವಿ. ರಮಣ, ಅರುಣ್ ಮಿಶ್ರಾ, ಆರ್.ಎಫ್. ನಾರಿಮನ್, ಆರ್. ಬಾನುಮತಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ಸುಪ್ರೀಂಕೋರ್ಟ್ನ ಐವರು ಸದಸ್ಯರ ನ್ಯಾಯಪೀಠ ಜನವರಿ 14ರಂದು ವಿಚಾರಣೆ ನಡೆಸಲಿದೆ.
ದೋಷಿಗಳಾದ ವಿನಯ್ ಶರ್ಮಾ (26) ಹಾಗೂ ಮುಖೇಶ್ ಕುಮಾರ್ (32) ಸುಪ್ರೀಂ ಕೋರ್ಟ್ನಲ್ಲಿ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ಇತರ ಇಬ್ಬರು ಅಕ್ಷಯ್ ಸಿಂಗ್ (31) ಹಾಗೂ ಪವನ್ ಗುಪ್ತಾ (25) ಕ್ಯುರೇಟಿವ್ ಅರ್ಜಿ ಸಲ್ಲಿಸಿಲ್ಲ.
ಕ್ಯುರೇಟಿವ್ ಅರ್ಜಿ ನ್ಯಾಯಮೂರ್ತಿಗಳ ಚೇಂಬರ್ನಲ್ಲಿ ನಿರ್ಧಾರವಾಗಲಿದೆ. ಇದು ಮರಣದಂಡನೆ ಎದುರು ನೋಡುತ್ತಿರುವ ದೋಷಿಗಳಿಗೆ ಇರುವ ಕೊನೆಯ ಕಾನೂನು ಅವಕಾಶ.
ದಿಲ್ಲಿ ನ್ಯಾಯಾಲಯ ನಾಲ್ವರು ದೋಷಿಗಳಿಗೆ ಮಂಗಳವಾರ ಡೆತ್ ವಾರಂಟ್ ಹೊರಡಿಸಿತ್ತು. ದಿಲ್ಲಿಯ ತಿಹಾರ್ ನ್ಯಾಯಾಲಯದಲ್ಲಿ ಅವರ ವಿಚಾರಣೆ ನಡೆಸಲು ಜನವರಿ 22ರಂದು ದಿನಾಂಕ ನಿಗದಿಪಡಿಸಿತ್ತು.
ವ್ಯಕ್ತಿಯನ್ನು ಗಲ್ಲಿಗೆ ಕಳುಹಿಸುವ ಸಮಾಜದ ಸಾಮೂಹಿಕ ಆತ್ಮಸಾಕ್ಷಿ ತಪ್ಪು ಎಂದು ವಿನಯ್ ಶರ್ಮಾ ತನ್ನ ಕ್ಯುರೇಟಿವ್ ಅರ್ಜಿಯಲ್ಲಿ ಹೇಳಿದ್ದಾನೆ.
ದೋಷಿಗಳಿಗೆ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿತ್ತು.