ಬಿಹಾರದ ನಂತರ ಆಂಧ್ರ ವಿಧಾನಸಭೆಯಿಂದ ಎನ್ ಪಿಆರ್ ವಿರುದ್ಧ ನಿರ್ಣಯ
ಫೈಲ್ ಚಿತ್ರ
ಹೈದರಾಬಾದ್, ಮಾ.3: ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ಪಿಆರ್)ಯ ನೂತನ ಪ್ರಶ್ನಾವಳಿಯಲ್ಲಿ ಸೇರಿಸಲಾಗಿರುವ ಹೊಸ ವಿವಾದಾಸ್ಪದ ಪ್ರಶ್ನೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರಕಾರವನ್ನು ಕೋರುವ ನಿರ್ಣಯವನ್ನು ಆಂಧ್ರಪ್ರದೇಶ ಸರಕಾರ ಅಂಗೀಕರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಂಗಳವಾರ ಮಾಡಿರುವ ಟ್ವೀಟ್ನಲ್ಲಿ ಸುಳಿವು ನೀಡಿರುವ ಮುಖ್ಯಮಂತ್ರಿ ವೈಎಸ್ ಜಗನ್ಮೋಹನ್ ರೆಡ್ಡಿ, ಎನ್ಪಿಆರ್ನಲ್ಲಿ ಸೇರಿಸಲಾಗಿರುವ ಕೆಲವು ಹೊಸ ಪ್ರಶ್ನೆಗಳು ರಾಜ್ಯದ ಅಲ್ಪಸಂಖ್ಯಾತ ವರ್ಗದವರಲ್ಲಿ ಅಭದ್ರತೆಯ ಭಾವನೆ ಮೂಡಿಸಬಹುದು ಎಂದು ಹೇಳಿದ್ದಾರೆ. ಪಕ್ಷದ ನಾಯಕರೊಂದಿಗೆ ವಿವರವಾಗಿ ಚರ್ಚಿಸಿದ ಬಳಿಕ, 2010ರ ಎನ್ಪಿಆರ್ ನೋಂದಣಿಯಲ್ಲಿದ್ದ ಪ್ರಶ್ನೆಗಳನ್ನು ಮಾತ್ರ ಉಳಿಸಿಕೊಳ್ಳುವಂತೆ ಕೇಂದ್ರ ಸರಕಾರವನ್ನು ಕೋರಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಲಾಗುವುದು ಎಂದವರು ಟ್ವೀಟ್ ಮಾಡಿದ್ದಾರೆ. ಮಂಗಳವಾರ ಮುಸ್ಲಿಂ ಸಮುದಾಯದ ನಿಯೋಗ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯನ್ನು ಭೇಟಿಯಾಗಿ ಎನ್ಪಿಆರ್ನಲ್ಲಿ ಸೇರಿಸಲಾಗಿರುವ ನೂತನ ಪ್ರಶ್ನಾವಳಿಗಳ ಬಗ್ಗೆ ಆತಂಕ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಣಯ ಅಂಗೀಕರಿಸಲು ನಿರ್ಧರಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಎನ್ಪಿಆರ್ನಲ್ಲಿ ಹೊಸದಾಗಿ ಸೇರಿಸಲಾಗಿರುವ ವಿವಾದಾಸ್ಪದ ಪ್ರಶ್ನಾವಳಿಯನ್ನು ಕೈಬಿಟ್ಟರೆ ಮಾತ್ರ ಎನ್ಪಿಆರ್ ಪ್ರಕ್ರಿಯೆ ನಡೆಸಲು ಸಹಕರಿಸುವುದಾಗಿ ಎನ್ಡಿಎ ಅಧಿಕಾರದಲ್ಲಿರುವ ಬಿಹಾರ ವಿಧಾನಸಭೆಯಲ್ಲಿ ಈಗಾಗಲೇ ನಿರ್ಣಯ ಅಂಗೀಕರಿಸಲಾಗಿದೆ.