ಪ್ರತ್ಯೇಕತಾವಾದ ಸಿಎಎ ವಿರೋಧಿ ಪ್ರತಿಭಟನೆಯ ಮುಖ್ಯ ಉದ್ದೇಶ: ದಿಲ್ಲಿ ಪೊಲೀಸರ ಅಫಿಡವಿಟ್ !
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ರತ್ಯೇಕತಾವಾದ ಸಿಎಎ ವಿರೋಧಿ ಪ್ರತಿಭಟನೆಯ ಮುಖ್ಯ ಉದ್ದೇಶಗಳಲ್ಲೊಂದು ಎಂದು ದಿಲ್ಲಿ ಪೊಲೀಸರು ದಿಲ್ಲಿ ಹೈಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ನಲ್ಲಿ ಪ್ರತಿಪಾದಿಸಿದ್ದಾರೆ.
ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ಸಂಬಂಧ ದಿಲ್ಲಿ ಪೊಲೀಸರು ಸಲ್ಲಿಸಿದ ಅಫಿಡವಿಟ್ನಲ್ಲಿ ಈ ಪ್ರತಿಪಾದನೆ ಮಾಡಲಾಗಿದೆ.
“ಈ ಪಿತೂರಿಯ ಉದ್ದೇಶ ಹಾಗೂ ಯೋಚನೆ” ಎಂಬ ಶೀರ್ಷಿಕೆಯಡಿ ಪೊಲೀಸರು, “ಇದು ಸಾಧ್ಯವಿರುವ ಯಾವುದೇ ಮಟ್ಟಕ್ಕೆ ಹೋಗಬಹುದು, ಅದು ಪೊಲೀಸರು ರಸ್ತೆ ತಡೆ ನಡೆಸಿದಾಗ ಅವರ ಜತೆಗೆ ಸಂಘರ್ಷ ಆರಂಭಿಸುವಲ್ಲಿಂದ ಹಿಡಿದು, ಎರಡು ಸಮುದಾಯಗಳ ನಡುವೆ ಗಲಭೆ ಸೃಷ್ಟಿಸುವುದು ಅಥವಾ ಕಾನೂನುಬದ್ಧವಾಗಿ ರಚನೆಯಾದ ಸರ್ಕಾರದ ವಿರುದ್ಧ ಸಶಸ್ತ್ರ ಬಂಡುಕೋರರನ್ನು ಉತ್ತೇಜಿಸುವ ಮೂಲಕ ಪ್ರತ್ಯೇಕತಾವಾದಿ ಚಳವಳಿಯನ್ನು ಬೆಳೆಸುವುದು ಇದರ ಉದ್ದೇಶ” ಎಂದು ವಿವರಿಸಿದ್ದಾರೆ.
ಡಿಸೆಂಬರ್ ನಲ್ಲಿ ಸಂಸತ್ ಪೌರತ್ವ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಿದ ತಕ್ಷಣ ದೇಶಾದ್ಯಂತ ಪ್ರತಿಭಟನೆ ಭುಗಿಲೆದ್ದಿತ್ತು. ಭಾರತದ ಸಂವಿಧಾನ ರಕ್ಷಣೆಯ ಗುರಿಯೊಂದಿಗೆ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಯ ಎಲ್ಲ ಕಡೆಗಳಲ್ಲಿ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಗಳು ಕಂಡುಬಂದಿದ್ದವು. ಆದರೆ ಅಫಿಡವಿಟ್ನಲ್ಲಿ ಮಾತ್ರ ಪೊಲೀಸರು, 'ನಾಗರಿಕ ಅವಿಧೇಯತೆಯನ್ನು ಬಡಿದೆಬ್ಬಿಸುವುದು ಉದ್ದೇಶ' ಎಂದು ಹೇಳಿದ್ದಾರೆ.