ಆಸ್ಪತ್ರೆಯಲ್ಲಿ ಮೂತ್ರದಿಂದ ಒದ್ದೆಯಾಗಿದ್ದ ಹಾಸಿಗೆಯಲ್ಲಿ ಮಲಗಿದ್ದ ವರವರ ರಾವ್: ಕುಟುಂಬಸ್ಥರ ಆರೋಪ
ಮುಂಬೈ : ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 2018ರಿಂದ ಬಂಧನದಲ್ಲಿರುವ ಹಿರಿಯ ಕವಿ ಮತ್ತು ಹೋರಾಟಗಾರ 79 ವರ್ಷದ ವರವರ ರಾವ್ ಅವರಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆದರೆ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ ವಿಚಾರ ಜೈಲಿನ ಅಧಿಕಾರಿಗಳು ಅವರ ಕುಟುಂಬಕ್ಕೆ ತಿಳಿಸಿರಲಿಲ್ಲ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಕೊನೆಗೆ ಜುಲೈ 15ರಂದು ಅವರ ಮೂವರು ಪುತ್ರಿಯರು, ಸೋದರಳಿಯ ವೇಣುಗೋಪಾಲ್ ಹಾಗೂ ಪತ್ನಿ ಹೇಮಲತಾ ಆಸ್ಪತ್ರೆಗೆ ತೆರಳಿದಾಗ ಅಲ್ಲಿ ರಾವ್ ಅವರು ಮೂತ್ರದಿಂದ ಒದ್ದೆಯಾಗಿದ್ದ ಹಾಸಿಗೆಯಲ್ಲಿ ಮಲಗಿರುವುದನ್ನು ಗಮನಿಸಿ ಆಘಾತಗೊಂಡಿದ್ದರು. ಆ ಸ್ಥಳದಲ್ಲಿ ದುರ್ನಾತ ಬರುತ್ತಿತ್ತು. ಅವರ ಆರೈಕೆಯನ್ನು ಯಾರೂ ಮಾಡಿರಲಿಲ್ಲ ಎಂದು ವೇಣುಗೋಪಾಲ್ ಆರೋಪಿಸಿದ್ದಾರೆ.
ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟ ನಂತರ ಈಗ ಅವರನ್ನು ಸರಕಾರದ ಕೋವಿಡ್ ಆಸ್ಪತ್ರೆಯಾಗಿರುವ ಸೈಂಟ್ ಜಾರ್ಜ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾವ್ ಅವರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಬೇಕೆಂದು ಕೋರಿ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ಹ್ಯೂಮನ್ ರೈಟ್ಸ್ ಡಿಫೆಂಡರ್ಸ್ ಅಲರ್ಟ್ ಇದರ ರಾಷ್ಟ್ರೀ ಯ ಕಾರ್ಯದರ್ಶಿ ಹೆನ್ರಿ ತಿಫಗ್ನೆ ಪತ್ರ ಬರೆದಿದ್ದಾರೆ.
ನವಿ ಮುಂಬೈನ ತಾಲೋಜ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾವ್ ಅವರ ಆರೋಗ್ಯ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಜುಲೈ 13ರಂದು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿ ಅವರ ಕುಟುಂಬ ಸದಸ್ಯರು ಪತ್ರಿಕಾಗೋಷ್ಠಿ ನಡೆಸಿದ ನಂತರ ಈ ಬೆಳವಣಿಗೆ ನಡೆದಿತ್ತು.