ಉತ್ತರ ಪ್ರದೇಶ ಸಿಎಂ ಕಚೇರಿಯ ಸಮೀಪ ಬೆಂಕಿ ಹಚ್ಚಿಕೊಂಡ ತಾಯಿ-ಮಗಳು
ಲಕ್ನೊ, ಜು.18: ಉತ್ತರಪ್ರದೇಶ ರಾಜಧಾನಿ ಲಕ್ನೋದಲ್ಲಿರುವ ವಿಧಾನಸೌಧ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್ ಕಚೇರಿ ಇರುವ ರಸ್ತೆಯಲ್ಲಿ ತಾಯಿ-ಮಗಳು ರಾಜ್ಯ ಪೊಲೀಸರ ನಿರ್ಲಕ್ಷವನ್ನು ಖಂಡಿಸಿ ಸ್ವತಃ ಬೆಂಕಿಹಚ್ಚಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ರಾಜ್ಯದ ಅಮೇಠಿ ಜಿಲ್ಲೆಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿ ತಾಯಿ-ಮಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗುಡಿಯಾ ಎಂದು ಗುರುತಿಸಲ್ಪಟ್ಟಿರುವ ಮಹಿಳೆಗೆ ಸುಟ್ಟ ಗಾಯವಾಗಿದ್ದು,ಲಕ್ನೊದ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಮಹಿಳೆಯ ಮಗಳಿಗೆ ಕೂಡ ಸುಟ್ಟ ಗಾಯವಾಗಿದ್ದು, ಅದೇ ಆಸ್ಪತ್ರೆಗೆ ದಾಖಲಿಸಲಾಗಿದೆ.
"ಇಬ್ಬರು ಮಹಿಳೆಯರು ಲೋಕ ಭವನದ ಸಮೀಪ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಓರ್ವ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಇನ್ನೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇಬ್ಬರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗಿದೆ'' ಎಂದು ಜಂಟಿ ಪೊಲೀಸ್ ಆಯುಕ್ತ(ಕಾನೂನು-ಸುವ್ಯವಸ್ಥೆ)ನವೀನ್ ಅರೋರ ಹೇಳಿದ್ದಾರೆ.
ತಮ್ಮ ಹಳ್ಳಿಯಲ್ಲಿ ಚರಂಡಿಯ ವಿಚಾರಕ್ಕೆ ಸಂಬಂಧಿಸಿ ನೆರೆಹೊರೆಯವರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರು ನಮ್ಮ ದೂರುಗಳ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ. ನನಗೆ ಕಿರುಕುಳ ನೀಡುತ್ತಿರುವವರೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.