ಜುಲೈ 31ರಂದೇ ವಿಧಾನಸಭೆ ಅಧಿವೇಶನ: ಗೆಹ್ಲೋಟ್ ಪಟ್ಟು
ಜೈಪುರ, ಜು.28: ರಾಜ್ಯ ವಿಧಾನಸಭೆಯ ಅಧಿವೇಶನ ಜುಲೈ 31ರಂದೇ ನಡೆಯಬೇಕು ಎಂದು ಸಚಿವ ಸಂಪುಟ ಬಯಸಿದೆ. ಅಧಿವೇಶನ ಕರೆಯಲು ಕೋರಿ ಎರಡು ಬಾರಿ ರಾಜ್ಯಪಾಲರಿಗೆ ಕಳುಹಿಸಿರುವ ಪ್ರಸ್ತಾವವಮ್ಮ ಕಾನೂನುಬದ್ಧ ಹಕ್ಕಾಗಿದ್ದು, ಇದನ್ನೇ ಮತ್ತೆ ರಾಜ್ಯಪಾಲರಿಗೆ ರವಾನಿಸಲಾಗುವುದು ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಮಂಗಳವಾರ ನಡೆದ ಸಚಿವ ಸಂಪುಟದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನ ಕರೆಯುವ ವಿಷಯದಲ್ಲಿ ರಾಜ್ಯಪಾಲರು ಎತ್ತಿರುವ ಕೆಲವೊಂದು ಪ್ರಶ್ನೆಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಭೆಯ ಕುರಿತು ಮಾಹಿತಿ ನೀಡಿದ ಸಾರಿಗೆ ಸಚಿವ ಪ್ರತಾಪ್ ಸಿಂಗ್, ರಾಜ್ಯಪಾಲರು ಎತ್ತಿರುವ 3 ಪ್ರಶ್ನೆಗಳಿಗೆ ಉತ್ತರ ಕಳಿಸುವ ಬಗ್ಗೆ ಚರ್ಚೆ ನಡೆದಿದೆ. ಅವರ ಪ್ರಶ್ನೆ ತುಂಬಾ ಸರಳವಾಗಿದೆ. ಅವರಿಗೆ ಪ್ರಶ್ನೆಗಳನ್ನು ಕೇಳುವ ಹಕ್ಕಿಲ್ಲ. ಆದರೂ ನಾವು ಉತ್ತರಿಸುತ್ತೇವೆ. ರಾಜ್ಯಪಾಲರೊಂದಿಗೆ ತಿಕ್ಕಾಟವನ್ನು ಸರಕಾರ ಬಯಸುವುದಿಲ್ಲ. ರಾಜ್ಯಪಾಲರು ನಮ್ಮ ಪ್ರಸ್ತಾವವನ್ನು ಸ್ವೀಕರಿಸುತ್ತಾರೆಂಬ ನಿರೀಕ್ಷೆಯಿದೆ ಎಂದರು.
ಅಧಿವೇಶನ ಕರೆಯಲು 21 ದಿನದ ನೋಟಿಸ್ ಅಗತ್ಯ ಎನ್ನುವ ರಾಜ್ಯಪಾಲರು ಅಧಿವೇಶನಕ್ಕೆ ಯಾಕೆ ದಿನ ನಿಗದಿಗೊಳಿಸುತ್ತಿಲ್ಲ ಎಂದು ಸಿಂಗ್ ಪ್ರಶ್ನಿಸಿದರು. ಅಧಿವೇಶನದ ಅಜೆಂಡಾದ ಬಗ್ಗೆ ಕೇಳಿದ ಪ್ರಶ್ನೆಗೆ ‘ಇದನ್ನು ವಿಧಾನಸಭೆಯ ವ್ಯವಹಾರ ಸಲಹಾ ಸಮಿತಿ ನಿರ್ಧರಿಸಲಿದೆ’ ಎಂದುತ್ತರಿಸಿದ ಸಿಂಗ್, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಆಸನದ ವ್ಯವಸ್ಥೆ ಮಾಡುವ ಬಗ್ಗೆ ಸ್ಪೀಕರ್ ಗಮನ ಹರಿಸಲಿದ್ದಾರೆ ಎಂದರು.
ರಾಜ್ಯ ಸರಕಾರವನ್ನು ಉರುಳಿಸಲು ಬಯಸಿರುವ ಬಿಜೆಪಿ ಇದನ್ನು ಪ್ರತಿಷ್ಠೆಯ ವಿಷಯವೆಂದು ಪರಿಗಣಿಸಿದೆ. ರಾಜಸ್ತಾನದ ಬಳಿಕ ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ಅವರ ಮುಂದಿನ ಗುರಿಯಾಗಿದೆ ಎಂದು ಸಿಂಗ್ ಆರೋಪಿಸಿದರು.